ದೆಹಲಿ: ದೇಶದ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಬಾಹುಬಲಿ ಬೇಲಿಯನ್ನು ಅಳವಡಿಸಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಜನರು ಮತ್ತು ಜಾನುವಾರುಗಳು ರಸ್ತೆದಾಟುವುದನ್ನು ತಡೆಯಲು, ಇದರಿಂದಾಗುವ ಅಪಘಾತವನ್ನು ತಪ್ಪಿಸಲು ಜತೆಗೆ ಪ್ರಾಣಹಾನಿಯನ್ನು ತಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲು ಯೋಚಿಸಲಾಗುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಷಾನಿಲ ಸೋರಿಕೆ: 3 ಮಕ್ಕಳು ಸೇರಿದಂತೆ 16 ಮಂದಿ ಸಾವು
ಈ ಬಾಹುಬಲಿ ಬೇಲಿಯು 1.20 ಮೀಟರ್ ಎತ್ತರವನ್ನು ಹೊಂದಿದ್ದು, ಈ ಬೇಲಿಯನ್ನು ಬಿದಿರನ್ನು ಬಳಸಿ ನಿರ್ಮಿಸಲಾಗಿದೆ. ಬಿದಿರನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸುವುದರ ಜತೆಗೆ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ನಿಂದ ಲೇಪಿಸಲಾಗುತ್ತದೆ. ಇದು ಉಕ್ಕಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಪ್ರಧಾನಿಗಳು ಛತ್ತಿಸಗಡ್ಕ್ಕೆ ಭೇಟಿ ಕೊಡುವ ಮುಂಚೆ, ರಾಷ್ಟ್ರೀಯ ಹೆದ್ದಾರಿ-30ರ ಬದಿಯಲ್ಲಿ ಮೊದಲ ಬಾರಿಗೆ ಅಳವಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಅಲ್ಲದೇ, ಈ ಬೇಲಿಯು ಬೆಂಕಿಯಿಂದಲೂ ಸುರಕ್ಷತೆಯನ್ನು ನೀಡುವುದರ ಜತೆಗೆ ಎಲ್ಲಾ ಹೆದ್ದಾರಿಗಳಲ್ಲಿ ಉಂಟಾಗುತ್ತಿರುವ ವನ್ಯಜೀವಿಗಳು ಮತ್ತು ಜಾನುವಾರುಗಳ ಹಾನಿಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)