ಐಮಂಗಲ: ಅಸಂಘಟಿತ ಕಾರ್ಮಿಕರು ಪ್ರಧಾನಮಂತ್ರಿ ಮಾನ್ಧನ್ ಯೋಜನೆಯಡಿ ಸಣ್ಣ ಪ್ರಮಾಣದಲ್ಲಿ ಹಣ ಉಳಿತಾಯ ಮಾಡಿದಲ್ಲಿ ಜೀವನದ ಸಂಧ್ಯಾಕಾಲದಲ್ಲಿ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಡಿ.ಎಂ.ವಿನುತಾ ಹೇಳಿದರು.
ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಮಾನ್ಧನ್ ಖಾತೆ ತೆರೆದು ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ಕೂಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದ್ದು, 18ರಿಂದ 40 ವರ್ಷದೊಳಗಿನವರು ಯೋಜನೆಗೆ ಅರ್ಹರು ಎಂದರು.
10 ವರ್ಷದೊಳಗೆ ಯೋಜನೆಯಿಂದ ಹೊರಬಂದರೆ ತಾವು ಪಾವತಿಸಿದ ವಂತಿಕೆ ಹಾಗೂ ಅದಕ್ಕಾಗುವ ಬಡ್ಡಿ ನೀಡಲಾಗುತ್ತದೆ. ಫಲಾನುಭವಿಗಳು ಆಕಸ್ಮಿಕವಾಗಿ ಮೃತರಾದರೆ, ಅಂಗವಿಕಲರಾದಲ್ಲಿ, ವಂತಿಕೆ ಪಾವತಿ ಮಾಡಲಾಗದಿದ್ದಲ್ಲಿ ಅವರ ಪತಿ ಅಥವಾ ಪತ್ನಿ ಯೋಜನೆಗೆ ಸೇರಿ ಮುಂದುವರಿಸಬಹುದಾಗಿದೆ ಅಥವಾ ವಂತಿಕೆ ಹಿಂಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಮೊದಲ ಕಂತನ್ನು ನಗದು ರೂಪದಲ್ಲಿ ಪಾವತಿಸಿ ಮುಂದಿನ ಕಂತುಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಯಿಂದ ನೇರ ಕಡಿತ ಮಾಡಿಕೊಳ್ಳಲಾಗುತ್ತದೆ. ಪ್ರತಿಯೊಬ್ಬರು ಯೋಜನೆಯ ಅನುಕೂಲ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಾಲಕಾರ್ಮಿಕ ಯೋಜನಾಧಿಕಾರಿ ಪಿ.ಸತೀಶ್, ಟಿ.ಎಲ್.ಬಸವರಾಜಪ್ಪ, ಓಂಕಾರಮೂರ್ತಿ, ಸುಕೂರ್, ಮಾನಾಚಾರಿ, ಭದ್ರಾಚಾರ್, ಮಂಜುನಾಥ್ ಆಚಾರ್ ಇತರರಿದ್ದರು.