ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಸೇರಿ ಮೂವರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಮುಂದುವರಿಸಲು (ಪ್ರಾಸಿಕ್ಯೂಷನ್) ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ, ಪ್ರಸ್ತಾವನೆ ಸಲ್ಲಿಸಿದೆ. ಅನುಮತಿ ಸಿಕ್ಕ ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದಾಗಿ ಹೇಳಿದೆ.
ಹಿಂದಿನ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್, ಉತ್ತರ ವಿಭಾಗ ಎಸಿ ಎಲ್.ಸಿ. ನಾಗರಾಜು ಮತ್ತು ಗ್ರಾಮ ಲೆಕ್ಕಿಗ ಎನ್. ಮಂಜುನಾಥ್ ವಿರುದ್ಧ ಆರೋಪ ಸಾಬೀತಾಗಿದ್ದು, ಅವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ವರದಿ ಸಲ್ಲಿಸುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಉದ್ವೇಗ ನಿಯಂತ್ರಿಸುವ ಯೋಗಾಭ್ಯಾಸ
ದುಬಾರಿ ಬಡ್ಡಿ ಆಮಿಷವೊಡ್ಡಿ ಐಎಂಎ ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್, ಲಕ್ಷಾಂತರ ಜನರಿಂದ 4 ಸಾವಿರ ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಐಡಿ ಆರ್ಥಿಕ ವಿಭಾಗಕ್ಕೆ ರಾಜ್ಯ ಸರ್ಕಾರ ಸೂಚಿಸಿತ್ತು. ಅಂದಿನ ಆರ್ಥಿಕ ಅಪರಾಧ ವಿಭಾಗದ ಐಜಿಪಿ ಹೇಮಂತ್ ನಿಂಬ್ಳಾಕರ್ ಮತ್ತು ಡಿವೈಎಸ್ಪಿ ಇ.ಬಿ. ಶ್ರೀಧರ್ ಸೇರಿಕೊಂಡು ಐಎಂಎ ಗ್ರೂಪ್ ಕಂಪನಿಗೆ ಕ್ಲೀನ್ಚಿಟ್ ನೀಡಿದ್ದರು.
ಬೆಂಗಳೂರು ನಗರ ಉತ್ತರ ವಿಭಾಗ ಉಪವಿಭಾಗಾಧಿಕಾರಿ ಆಗಿದ್ದ ಎಲ್.ಸಿ. ನಾಗರಾಜು ಕೂಡ ಸೂಕ್ತ ವಿಚಾರಣೆ ನಡೆಸದೆ ಐಎಂಎಗೆ ಕ್ಲೀನ್ಚಿಟ್ ನೀಡಿದ್ದರು. ಈ ವರದಿಯನ್ನು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ನೀಡಿ ವಂಚಕ ಕಂಪನಿಯನ್ನು ಅಂದಿನ ಬೆಂಗಳೂರು ನಗರ ಡಿಸಿ ವಿಜಯಶಂಕರ್, ಪಾರು ಮಾಡಿದ್ದರು. ಇದರಲ್ಲಿ ಮಂಜುನಾಥ್ ಸಾಥ್ ನೀಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!
ಈಗಾಗಲೇ ಪೊಲೀಸ್ ಅಧಿಕಾರಿ, ಐಎಂಎ ಕಂಪನಿ ಮಾಲೀಕ, ಖಾಸಗಿ ವ್ಯಕ್ತಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದೀಗ ಈ ಮೂವರು ಅಧಿಕಾರಿಗಳ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.