ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಶಾಲಾ ಮಕ್ಕಳಲ್ಲಿ ವರ್ಣ ತಾರತಮ್ಯ ಉಂಟುಮಾಡುವ ರೀತಿಯ ಪಠ್ಯ ಈಗ ವಿವಾದಕ್ಕೀಡಾಗಿದೆ. ಆಂಗ್ಲ ವರ್ಣಮಾಲೆಯಲ್ಲಿ ಯು ಎಂಬ ಅಕ್ಷರಕ್ಕೆ ಅಗ್ಲಿ ಎಂಬ ಪದವನ್ನು ಮಕ್ಕಳಿಗೆ ಪರಿಚಯಿಸಿದ್ದು, ಚಿತ್ರ ರೂಪದಲ್ಲಿ ಅರ್ಥ ಮಾಡಿಸುವುದಕ್ಕೆ ಕಪ್ಪು ವರ್ಣದ ಮನುಷ್ಯನ ಚಿತ್ರವನ್ನೂ ನೀಡಲಾಗಿದೆ. ಈ ವಿಚಾರವೀಗ ಅಲ್ಲಿ ವಿವಾದದ ಕೇಂದ್ರಬಿಂದು.
ಬೆಳಕಿಗೆ ಬಂದದ್ದು ಹೇಗೆ?
ಸದ್ಯ ಕರೊನಾ ಲಾಕ್ಡೌನ್ ಚಾಲ್ತಿಯಲ್ಲಿದೆ. ಶಾಲೆಗಳೂ ತೆರೆದಿಲ್ಲ. ಆದಾಗ್ಯೂ ಒಬ್ಬ ವಿದ್ಯಾರ್ಥಿಯ ತಂದೆ ಶಾಲೆಯಿಂದ ಕೊಟ್ಟ ಆ ಪುಸ್ತಕ ಹಿಡಿದು ಮಗುವಿಗೆ ಪಾಠ ಹೇಳುವಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಅವರು ಇತರೆ ಪಾಲಕರಿಗೆ ತಿಳಿಸಿದ್ದಲ್ಲದೆ, ಶಿಕ್ಷಣ ಇಲಾಖೆಯ ಗಮನಕ್ಕೂ ತಂದ ಕಾರಣ ಇದು ಎಲ್ಲರ ಗಮನಸೆಳೆಯಿತು ಎಂದು ಮೂಲಗಳು ತಿಳಿಸಿವೆ.
ಈಸ್ಟ್ ಬರ್ದ್ವಾನ್ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ಈ ವಿವಾದಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಪ್ರೀ-ಪ್ರೈಮರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಇವರು. ಮಕ್ಕಳಿಗೆ ಪೂರೈಸಲಾದ ಪಠ್ಯ ಪುಸ್ತಕದಲ್ಲಿ ಯು ಎಂಬ ಅಕ್ಷರವನ್ನು ಪರಿಚಯಿಸುವ ಸಂದರ್ಭದಲ್ಲಿ ಆ ಅಕ್ಷರದ ಕೆಳಗೆ ಕಪ್ಪು ವರ್ಣದ ಬಾಲಕನ ಚಿತ್ರವನ್ನು ಮುದ್ರಿಸಲಾಗಿದೆ.
ಇದನ್ನೂ ಓದಿ: ಉದ್ವೇಗ ನಿಯಂತ್ರಿಸುವ ಯೋಗಾಭ್ಯಾಸ
ಶಿಕ್ಷಣ ಇಲಾಖೆ ಶಿಫಾರಸು ಮಾಡಿರುವ ಪಠ್ಯ ಪುಸ್ತಕಗಳ ಪಟ್ಟಿಯಲ್ಲಿ ಈ ಪುಸ್ತಕ ಇಲ್ಲ. ಆ ಶಾಲೆಯಲ್ಲಿ ಮಾತ್ರವೇ ಅದನ್ನು ಬಳಸಲಾಗಿದೆ. ಅದು ಶಾಲೆಯ ನಿರ್ಧಾರ. ಇಂತಹ ವಿಷಯಗಳನ್ನೆಲ್ಲ ನಾವು ಸಹಿಸುವುದು ಸಾಧ್ಯವೇ ಇಲ್ಲ. ಇದು ಮಕ್ಕಳ ಮನಸ್ಸಿನಲ್ಲಿ ಪೂರ್ವಗ್ರಹಗಳು ನೆಲೆ ನಿಲ್ಲುವಂತೆ ಮಾಡುತ್ತದೆ. ಇಂತಹ ಕ್ರಮಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಮುನಿಸಿಪಾಲಿಟಿ ಶಾಲೆಯ ಇಬ್ಬರು ಶಿಕ್ಷಕರನ್ನು ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ಘಟನೆ ಬೆಳಕಿಗೆ ಬಂದ ಕೂಡಲೆ ಪ್ರಾಥಮಿಕ ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ. ತನಿಖೆಯ ಎಲ್ಲ ಕ್ರಮಗಳು ಪೂರ್ಣಗೊಂಡ ನಂತರದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚಟರ್ಜಿ ಹೇಳಿದ್ಧಾರೆ.
ಇಂದು ನಟಿ ಮಯೂರಿ ಮದುವೆ: ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿಯಲು ಸಜ್ಜು