ಬೆಂಗಳೂರು: ಇಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಇಬ್ಬರು ಶಂಕಿತರೇ ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರರು ಎಂಬುದು ಬಯಲಾಗಿದೆ. ಇಬ್ಬರು ಶಂಕಿತರಲ್ಲಿ ಒಬ್ಬ ಕೆಫೆಗೆ ಬಾಂಬ್ ಇಟ್ಟ ಉ್ರಗನೆಂಬುದು ತಿಳಿದುಬಂದಿದೆ.
ಇಬ್ಬರನ್ನು ಪಶ್ಚಿಮ ಬಂಗಾಳದ ಪೂರ್ವ ಮಿದ್ನಾಪೂರ್ ಜಿಲ್ಲೆಯ ಕಾಂಥಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಮತೀನ್ ತಹಾ ಮತ್ತು ಮುಸ್ಸಾವೀರ್ ಹುಸೇನ್ ಶಾಝೇಬ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ, ಕರ್ನಾಟಕ, ತೆಲಂಗಾಣ ಮತ್ತು ಕೇರಳ ಪೊಲೀಸ್ ಮತ್ತು ಎನ್ಐಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ವೇಳೆ ಶಂಕಿತರನ್ನು ಬಂಧಿಸಲಾಗಿದೆ.
ಲಭ್ಯವಿರುವ ಪುರಾವೆಗಳ ಪ್ರಕಾರ ಆರೋಪಿ ಶಾಝೇಬ್ ಸ್ಫೋಟಕ ಸಾಧನವನ್ನು ಬ್ಯಾಗ್ನಲ್ಲಿ ಇಟ್ಟು ಜನಪ್ರಿಯ ಉಪಾಹಾರ ಮಂದಿರ ರಾಮೇಶ್ವರ ಕೆಫೆಯಲ್ಲಿ ಇರಿಸಿದ್ದ ಎಂದು ತಿಳಿದುಬಂದಿದೆ. ದಾಳಿಯ ಯೋಜನೆ ಮತ್ತು ಬಾಂಬರ್ ನಾಪತ್ತೆಯಾಗಲು ಮತ್ತೊಬ್ಬ ಆರೋಪಿ ಮತೀನ್ ತಹಾ ಕಾರಣ ಎಂಬುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಮೂರು ಮತ್ತು ನಾಲ್ಕನೇ ಬಂಧನವಾಗಿದೆ. ಈ ಹಿಂದೆ ಮಾಜ್ ಮುನೀರ್ ಮತ್ತು ಮುಜಾಮಿಲ್ ಶರೀಫ್ ಎಂಬುವರನ್ನು ಎನ್ಐಎ ಬಂಧಿಸಿದೆ.
ಶಂಕಿತ ಶರೀಫ್, ಬಾಂಬರ್ಗೆ ಲಾಜಿಸ್ಟಿಕ್ ಬೆಂಬಲ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಶರೀಫ್ ಹೇಳಿಕೆಯನ್ನು ಆಧರಿಸಿ ಮಾಜ್ ಮುನೀರ್ನನ್ನು ಬಂಧಿಸಲಾಗಿದೆ. ಈತ ಶಿವಮೊಗ್ಗ ಸ್ಫೋಟ ಮತ್ತು ಮಂಗಳೂರು ಗಲಭೆ ಪ್ರಕರಣದ ಶಂಕಿತನಾಗಿದ್ದಾನೆ. ಇದೀಗ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಒಟ್ಟು ಈ ಪ್ರಕರಣದಲ್ಲಿ ನಾಲ್ವರ ಬಂಧನವಾಗಿದೆ.
ಕರ್ನಾಟಕ, ತಮಿಳುನಾಡು ಮತ್ತು ಉತ್ತರಪ್ರದೇಶದಾದ್ಯಂತ 18 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ ನಂತರ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ಶಾಜೇಬ್ ಮತ್ತು ತಾಹಾನನ್ನು ಪಶ್ಚಿಮ ಬಂಗಾಳದ ಕಂಠಿಯಲ್ಲಿ ಸೆರೆಹಿಡಿದಿದ್ದಾರೆ.
ಮಾರ್ಚ್ 1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಶಂಕಿತ ಬಾಂಬರ್ ರವೆ ಇಡ್ಲಿ ತಿಂದು, ಬಾಂಬ್ ಇಟ್ಟು ಪರಾರಿಯಾಗಿದ್ದ. ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು. ಇದರಲ್ಲಿ ಕೆಫೆ ಸಿಬ್ಬಂದಿ ಮತ್ತು ಗ್ರಾಹಕರೂ ಸೇರಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾಣಿ ಸಂಭವಿಸಿರಲಿಲ್ಲ.
ದಾಳಿಯ ಬಳಿಕ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಎನ್ಐಎ ಶಂಕಿತರಿಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಬಾಂಬರ್ ಚಲಾವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಾಂಬರ್ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಓಡಾಡಿದ್ದ. ಶಂಕಿತರ ಬಗ್ಗೆ ಮಾಹಿತಿ ನೀಡಿದರೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಎನ್ಐಎ ಅಧಿಕಾರಿಗಳು ಘೋಷಣೆ ಮಾಡಿದ್ದರು. ಕೊನೆಗೂ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಬಾಂಬರ್ ಇಬ್ಬರು ಸಿಕ್ಕಿಬಿದ್ದಿದ್ದಾರೆ. (ಏಜೆನ್ಸೀಸ್)
ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತರ ಬಂಧನ