ರಾಮದುರ್ಗ: ತಾಲೂಕಿನ ಹಿರೇತಡಸಿಯಲ್ಲಿ ಅಕ್ರಮ ಕಳ್ಳಬಟ್ಟಿ ಮದ್ಯ ತಯಾರಿಸುತ್ತಿದ್ದು, ಕೂಡಲೇ ತಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಹಿರೇತಡಸಿ ಗ್ರಾಮಸ್ಥರು ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ತಹಸೀಲ್ದಾರ್ ಮೂಲಕ ಡಿಸಿ ಮತ್ತು ರಾಮದುರ್ಗ ಆರಕ್ಷಕ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಅಕ್ರಮ ಕಳ್ಳಬಟ್ಟಿ ಸಾರಾಯಿ ಕುಡಿಯಲು ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ. ಇದರಿಂದ ಗ್ರಾಮಕ್ಕೆ ಕರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ದೇಶವೇ ಕರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ. ಆದರೆ, ಕಳ್ಳಬಟ್ಟಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕಳ್ಳಬಟ್ಟಿ ಸಾರಾಯಿ ಮಾರಾಟ ಹಾಗೂ ತಯಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರು ಹಲವು ಬಾರಿ ವಿನಂತಿಸಿದರೂ ಕೆಲ ಕುಟುಂಬಗಳು ಅಕ್ರಮ ದಂಧೆ ನಿಲ್ಲಿಸಿಲ್ಲ. ಕೂಡಲೇ ಕಳ್ಳಬಟ್ಟಿ ದಂಧೆಯನ್ನು ತಡೆಯಲು ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ, ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ಇಲಾಖೆ ಅಧಿಕಾರಿಗಳಿಗೆ ಅಕ್ರಮ ಕಳ್ಳಬಟ್ಟಿ ಮದ್ಯ ತಯಾರಿಕೆ ತಡೆಯುವಂತೆ ಸೂಚಿಸುತ್ತೇನೆ ಎಂದರು. ರಾಮಣ್ಣ ಜಾಧವ, ರಮೇಶ ಜಾಧವ, ಪ್ರಕಾಶ ಜಾಧವ, ಗೌಡಪ್ಪಗೌಡ, ಬಾಪುಗೌಡ ಪಾಟೀಲ, ಹನುಮಂತ ಜಾಧವ, ಶಿವಾನಂದ ಜಾಧವ, ಪುಂಡಲೀಕ ಜಾಧವ, ಶರಣಪ್ಪಗೌಡ ಪಾಟೀಲ, ನಿಂಗನಗೌಡ ಪಾಟೀಲ, ಲಕ್ಷ್ಮಣ ಬಾಬರ, ಭೀಮಶಿ ಅವರಾದಿ, ಕಲ್ಲನಗೌಡ ಪಾಟೀಲ, ಮುತ್ತಪ್ಪ ಉಪ್ಪಾರ, ಪ್ರವೀಣ ಜಾಧವ, ಮಹೇಶಗೌಡ ಪಾಟೀಲ, ಸಂಜು ಕಾಳೆ ಹಾಗೂ ಗ್ರಾಮಸ್ಥರು ಇದ್ದರು.