ಬೆಳಗಾವಿ: ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ಆಗ್ರಹಿಸಿ ಜಿಲ್ಲಾ ಎಂ.ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಂಡುರಂಗ ರಡ್ಡಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮಂಗಳವಾರ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ರಾಜಗೊಳಿ ಮತ್ತು ದಡ್ಡಿ, ಎಪಿಎಂಸಿ, ಕಾಕತಿ ಹಾಗೂ ಖಾನಾಪುರ ತಾಲೂಕಿನ ದೇಸೂರ, ಗರ್ಲಗುಂಜಿ ಗ್ರಾಮಗಳಿಂದ ಯಳ್ಳೂರ-ಮಚ್ಛೆ ಮಾರ್ಗವಾಗಿ ಅಕ್ರಮ ಮರಳನ್ನು ಹೊತ್ತು ಸುಮಾರು 300ಕ್ಕೂ ಅಧಿಕ ಲಾರಿಗಳು ಬೆಳಗಾವಿ ನಗರದಲ್ಲಿ ಸಂಜೆ 7ರಿಂದ ಬೆಳಗ್ಗೆ 7ರ ವರೆಗೆ ಸಂಚರಿಸುತ್ತಿವೆ. ಪರಿಣಾಮ ಜಿಲ್ಲೆಯ 40 ಎಂ.ಸ್ಯಾಂಡ್ ಘಟಕಗಳು ಕಷ್ಟದ ಸ್ಥಿತಿಯಲ್ಲಿವೆ.
ಜಿಲ್ಲೆಯಲ್ಲಿರುವ ಎಂ.ಸ್ಯಾಂಡ್ ಘಟಕಗಳಿಂದ ವಾರ್ಷಿಕ ಸರಾಸರಿ 35-40 ಲಕ್ಷ ಮೆಟ್ರಿಕ್ ಟನ್ ಎಂ.ಸ್ಯಾಂಡ್ ಉತ್ಪಾದನೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಕೊಡಲಾಗಿದೆ. ಆದರೆ, ಸದ್ಯ ಜಿಲ್ಲೆಯಲ್ಲಿ 20-30 ಲಕ್ಷ ಮೆಟ್ರಿಕ್ ಟನ್ ಮಾತ್ರ ಎಂ.ಸ್ಯಾಂಡ್ ಉತ್ಪಾದನೆಯಾಗುತ್ತಿದೆ. ಎಂ.ಸ್ಯಾಂಡ್ ಘಟಕ ಸ್ಥಾಪಿಸಲು ಘಟಕವೊಂದಕ್ಕೆ ಸುಮಾರು 4-5 ಕೋಟಿ ರೂ. ವೆಚ್ಚ ತಗಲುತ್ತದೆ. ಘಟಕ ಸ್ಥಾಪಿಸಲು ಉದ್ದಿಮೆದಾರರು ಬ್ಯಾಂಕ್ನಿಂದ ಪಡೆದ ಸಾಲವನ್ನು ಪಾವತಿಸಲು ಕಷ್ಟ ಅನುಭವಿಸುತ್ತಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಎಂ.ಸ್ಯಾಂಡ್ ಘಟಕಗಳು ಮುಚ್ಚವುದಲ್ಲದೆ ಇದನ್ನೇ ನಂಬಿರುವ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಬೀದಿಗೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ಅಕ್ರಮ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿ ಎಂ. ಸ್ಯಾಂಡ್ಗೆ ಉತ್ತೇಜನ ನೀಡಬೇಕೆಂದು ಮನವಿ ಮೂಲಕ ವಿನಂತಿಸಿದರು.
ಎಂ.ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಪಾಂಡುರಂಗ ರಡ್ಡಿ, ಸಂಜು ಕುಪ್ಪಸಗೌಡರ, ಅಜಯ ಪೂಜಾರಿ, ರವೀಂದ್ರ ಹಿರೇಮಠ, ಚಂದ್ರಶೇಖರ ಕೊಣ್ಣೂರು, ರಂಗನಾಥ ಭಜಂತ್ರಿ, ರಾಜು ಟೊಮಾರೆ, ಶಿವಾಜಿ ಟೋಮಾರೆ, ಮಹಾದೇವ ಪಾಟೀಲ, ಯುಸೂಫ್ ಸನದಿ, ಎಸ್.ಎ.ಬಸರಿಕಟ್ಟಿ, ಶಾನವಾರ್ ಮುನವಳ್ಳಿ, ಕತಾಲ್ ಮಿರ್ಜಾಪುರ, ಶಿವಾಜಿ ಮುಳ್ಳೂರು, ರಾಜು ಬೆನಕಟ್ಟಿ ಸೇರಿ ಇನ್ನಿತರರು ಇದ್ದರು.