ಬೆಂಗಳೂರು : ಅನೈತಿಕ ಸಂಬಂಧ ಪ್ರಶ್ನಿಸಿದ ಟೆಕ್ಕಿಯೊಬ್ಬನ ಮೇಲೆ ಆತನ ಹೆಂಡತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ನಗರದ ಸೀಗೇಹಳ್ಳಿಯ ರವಿ ಪ್ರಕಾಶ್ ಮಿಶ್ರಾ (41) ಹಲ್ಲೆಗೆ ಒಳಗಾಗಿರುವ ಟೆಕ್ಕಿ. ಇವರು ನೀಡಿದ ದೂರಿನ ಮೇರೆಗೆ ಟೆಕ್ಕಿ ಪತ್ನಿ, ಸ್ಮಿತಾ ಮಿಶ್ರಾ ಮತ್ತು ಉತ್ಕರ್ಷ ಭಟ್ನಾಗರ್ ಎಂಬಾತನ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸ್ಮಿತಾ ಮತ್ತು ಆಕೆ ಪ್ರಿಯಕರ ಉತ್ಕರ್ಷ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟಾವೇರ್ ಕಂಪೆನಿ ಇಂಜಿನಿಯರ್ಗಳಾದ ರವಿ ಪ್ರಕಾಶ್ ಮತ್ತು ಸ್ಮಿತಾ ದಂಪತಿ ತನ್ನ ಮಗನ ಜತೆ ಸೀಗೇಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ಕರೊನಾ ಹಿನ್ನೆಲೆಯಲ್ಲಿ ರವಿಪ್ರಕಾಶ್, 1 ವರ್ಷದಿಂದ ಮನೆಯಿಂದ ಕೆಲಸ ಮಾಡುತ್ತಿದ್ದ. ಸ್ಮಿತಾ, ಟಿವಿಎಸ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಕಚೇರಿಯಲ್ಲಿ ಸಹೋದ್ಯೋಗಿ ಉತ್ಕರ್ಷ ಭಟ್ನಾಗರ್ ಜತೆ ಸ್ಮಿತಾಗೆ ಅಕ್ರಮ ಸಂಬಂಧವಿತ್ತು.
ಏಪ್ರಿಲ್ 23ರ ತಡರಾತ್ರಿ 1.30ರಲ್ಲಿ ಪತ್ನಿ ಜೊತೆಗೆ ಮಲಗಿದ್ದಾಗ ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದೆ. ಏಕಾಏಕಿ ಕುಪಿತಗೊಂಡ ಸ್ಮಿತಾ, ಜಗಳ ತೆಗೆದು ಚಾಕುವನ್ನು ತೆಗೆದುಕೊಂಡು ಎದೆಯ ಎರಡು ಭಾಗಕ್ಕೆ ಚುಚ್ಚಿ ಮತ್ತು ಕೈ ಬೆರಳಿಗೆ ಗಾಯ ಮಾಡಿ ಕೊಲೆಗೆ ಯತ್ನಿಸಿದಳು. ಆಕೆಯಿಂದ ತಪ್ಪಿಸಿಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ ಬರುವಷ್ಟರಲ್ಲಿ ಸ್ಮಿತಾ ಪರಾರಿ ಆಗಿದ್ದಾಳೆ. ನನ್ನ ಮೇಲೆ ಕೊಲೆ ಯತ್ನಕ್ಕೆ ಪ್ರಚೋಧನೆ ನೀಡಿದ ಉತ್ಕರ್ಷ ಮತ್ತು ಸ್ಮಿತಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ರವಿ ಪ್ರಕಾಶ್ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜಕಾರಣಿಗಳ ಮೇಲೆ ನೆಟ್ಟಿಗರ ಕೆಂಗಣ್ಣು : ನಾಯಕರ ಖಾಸಗಿ ನಂಬರ್ಗಳು ವೈರಲ್ !