ಕೊಲ್ಕತಾ : ದೇಶದಲ್ಲಿ ಕರೊನಾ ಉಲ್ಬಣಿಸಿರುವ ಸಂದರ್ಭದಲ್ಲೂ ಕೆಲವು ರಾಜ್ಯಗಳಲ್ಲಿ ಚುನಾವಣೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವ ರಾಜಕಾರಣಿಗಳ ಬಗ್ಗೆ ಜನ ಸಿಟ್ಟಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕರೊನಾ ಮರೆತು ಸಾವಿರಾರು ಜನರನ್ನು ಸೇರಿಸಿ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ರಾಜಕಾರಣಿಗಳ ಮೇಲೆ ಸೇಡು ತೀರಿಸಿಕೊಳ್ಳಲು ನೆಟ್ಟಿಗರು ಮುಂದಾಗಿದ್ದಾರೆ.
ಇದಕ್ಕೆ ನಿದರ್ಶನವೆಂಬಂತೆ, ರಕ್ತ, ಆಕ್ಸಿಜನ್, ಆ್ಯಂಬುಲೆನ್ಸ್ಗಾಗಿ ಅಷ್ಟೇ ಅಲ್ಲ, ಸ್ಯಾನಿಟೈಸರ್, ಮಾಸ್ಕ್ಗಳಿಗಾಗಿ ಸಂಪರ್ಕಿಸಿ ಎಂದು ಟಿಎಂಸಿ ಮತ್ತು ಬಿಜೆಪಿಯ 14 ಹಿರಿಯ ನಾಯಕರ ಖಾಸಗಿ ದೂರವಾಣಿ ಸಂಖ್ಯೆಗಳನ್ನು ಒಳಗೊಂಡ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹರಿದುಬಂತು ಸಹಾಯ : ದೆಹಲಿ, ಮುಂಬೈ ತಲುಪಿದ ಆಕ್ಸಿಜನ್ ಕಾನ್ಸಂಟ್ರೇಟರ್ಗಳು
ಬಂಗಾಳದಲ್ಲಿ ಭಾನುವಾರ 15,889 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 7,43,950 ತಲುಪಿದೆ. ಒಂದೇ ದಿನದಲ್ಲಿ 57 ಸಾವುಗಳು ಸಂಭವಿಸಿದ್ದು, ಒಟ್ಟು ಮರಣ ಸಂಖ್ಯೆ 10,941 ತಲುಪಿದೆ. ಈ ಹಿನ್ನೆಲೆಯಲ್ಲಿ ಬೆಡ್ ಮತ್ತು ಆಕ್ಸಿಜನ್ಗಳ ಕೊರತೆ ತಲೆದೋರಿದೆ. ಆದರೆ ತಮ್ಮ ಪಾಡಿಗೆ ತಾವು ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಹಲವು ರಾಜಕಾರಣಿಗಳತ್ತ ನೆಟ್ಟಿಗರು ಕೆಂಗಣ್ಣು ತೋರಿದ್ದಾರೆ.
ಈ ವೈರಲ್ ಸಂದೇಶದಲ್ಲಿ, “ಕರೊನಾ ವೈರಸ್ಗೆ ಏಕೆ ಹೆದರುತ್ತೀರಿ ? ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಉತ್ಸುಕರಾದ ರಾಜಕಾರಣಿಗಳು ಇದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಬ್ಲಡ್, ಆಕ್ಸಿಜನ್ ಮತ್ತು ಆ್ಯಂಬುಲೆನ್ಸ್ ಸೇವೆಗಳಿಗಾಗಿ ಕೂಡಲೇ ಈ ನಾಯಕರಿಗೆ ಕರೆ ಮಾಡಿ” ಎಂದು ಬರೆಯಲಾಗಿದೆ. ಜೊತೆಗೆ ಮುಕುಲ್ ರಾಯ್, ಸುವೇಂದು ಅಧಿಕಾರಿ, ರಾಜೀಬ್ ಬ್ಯಾನರ್ಜಿ, ಬಾಬುಲ್ ಸುಪ್ರಿಯೋ, ರಾಜ್ ಚಕ್ರಬೊರ್ತಿ ಮುಂತಾದ ನಾಯಕರ ಖಾಸಗಿ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ನೀಡಲಾಗಿದೆ. ಈ ಸಂದೇಶ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)
“ಬೆಡ್ ಇದ್ದಲ್ಲಿ ಯಾವ ಆಸ್ಪತ್ರೆಯೂ ಅಡ್ಮಿಷನ್ ನಿರಾಕರಿಸುವಂತಿಲ್ಲ” ; ಖಾಸಗಿ ಆಸ್ಪತ್ರೆ ವೆಚ್ಚ ಭರಿಸಲಿದೆ ಸರ್ಕಾರ !