ವಿಜಯವಾಣಿ ಸುದ್ದಿಜಾಲ ಗುತ್ತಲ
ನೆಗಳೂರ ಗ್ರಾಮದ ಪ್ರವಾಸಿ ಮಂದಿರ ಶಿಥಿಲಾವಸ್ಥೆ ತಲುಪಿದ್ದು ಮೇಲ್ಛಾವಣಿಯ ಸಿಮೆಂಟ್ ಕಾಂಕ್ರೀಟ್ ಕಳಚಿ ಬೀಳುತ್ತಿದೆ. ಇದರಿಂದ ಪ್ರವಾಸಿ ಮಂದಿರಕ್ಕೆ ಆಗಮಿಸುವವರು ಆತಂಕ ಪಡುವಂತಾಗಿದೆ.
1969ರಲ್ಲಿ ಅಂದಿನ ಶಾಸಕ ಗ್ರಾಮದ ಎಸ್.ಎಫ್. ತಾವರೆ ಅವರ ಪ್ರಯತ್ನದ ಫಲವಾಗಿ ಪ್ರವಾಸಿ ಮಂದಿರ ಸ್ಥಾಪನೆಯಾಗಿತ್ತು. ಸರಿಯಾದ ನಿರ್ವಹಣೆಯಿಲ್ಲದೆ ಪ್ರವಾಸಿ ಮಂದಿರ ಶಿಥಿಲಾವಸ್ಥೆ ತಲುಪಿದ್ದು, ಮೇಲ್ಛಾವಣಿಯ ಕಬ್ಬಿಣದ ಸರಳುಗಳು ಕಾಣುತ್ತಿದೆ. ಯಾವಾಗ ಸಿಮೆಂಟ್ ಕಳಚಿ ಬೀಳುವುದೋ ಎಂಬ ಭಯ ಶುರುವಾಗಿದೆ. ಸುಮಾರು 51 ವರ್ಷಗಳ ಹಿಂದೆ ಈ ಪ್ರವಾಸಿ ಮಂದಿರ ನಿರ್ವಿುಸಲಾಗಿದೆ. ಕಟ್ಟಡದ ಕೆಲವು ಗೋಡೆಗಳೂ ಬಿರುಕು ಬಿಟ್ಟಿವೆ.
ಪ್ರವಾಸಿ ಮಂದಿರದ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಿ ಸುಂದರ ಉದ್ಯಾನವನ್ನಾಗಿ ಮಾಡಿದರೆ ಸರ್ಕಾರಕ್ಕೂ ಆದಾಯ ಲಭಿಸಲಿದೆ. ಕೂಡಲೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರವಾಸಿ ಮಂದಿರದ ಶಿಥಿಲಗೊಂಡ ಮೇಲ್ಛಾವಣಿಯನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯ.
| ಸಂಜಯಗಾಂಧಿ ಸಂಜೀವಣ್ಣನವರ, ಯುವ ಕಾಂಗ್ರೆಸ್ ಮುಖಂಡ, ನೆಗಳೂರ
ಈಗಾಗಲೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಮೇಲ್ಛಾವಣಿಯನ್ನು ಪರಿಶೀಲಿಸಿ ರಿಪೇರಿ ಕಾರ್ಯಕ್ಕೆ ಸೂಚಿಸಲಾಗುವುದು. ಆದಷ್ಟು ಬೇಗ ಈ ಕಾರ್ಯವನ್ನು ಮುಗಿಸಲಾಗುವುದು.
| ಭಾವನಾಮೂರ್ತಿ, ಇಇ, ಪಿಡಬ್ಲೂಡಿ, ಹಾವೇರಿ