ನವದೆಹಲಿ: ಮೆಟ್ರೋಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಇ. ಶ್ರೀಧರನ್ ಅವರು ಬಿಜೆಪಿಗೆ ಸೇರಲು ಸಜ್ಜಾಗಿರುವುದು ಈಗ ಹಳೇ ವಿಷಯ. ಆದರೆ ಅದರ ಜತೆಗೆ ಅವರು ಹೊಸ ವಿಷಯವೊಂದನ್ನೂ ಬಹಿರಂಗಪಡಿಸಿದ್ದಾರೆ. ಅದೇನೆಂದರೆ, ಬಿಜೆಪಿ ಗೆದ್ದರೆ ತಾವು ಮುಖ್ಯಮಂತ್ರಿ ಆಗಲು ಸಿದ್ಧವಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮುಂದಿನ ವಾರ ಬಿಜೆಪಿಗೆ ಸೇರಲು ಸಜ್ಜಾಗಿರುವ ಅವರು ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಹೇಳಿಕೊಂಡಿದ್ದು, ಈ ನಡುವೆ ಮುಖ್ಯಮಂತ್ರಿ ಆಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಖ್ಯ ಗುರಿ. ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆದ್ದರೆ ನಾನು ಕೇರಳದ ಮುಖ್ಯಮಂತ್ರಿ ಆಗಲು ಕೂಡ ಸಿದ್ಧ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಏಪ್ರಿಲ್-ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗಾಗಿ ತಮ್ಮಲ್ಲಿ ಹಲವಾರು ಯೋಜನೆಗಳು ಇರುವುದಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಬೇಕಾದ ಅಗತ್ಯವಿದೆ. ಆ ಪೈಕಿ ಮೂಲಭೂತ ಸೌಕರ್ಯ ಪ್ರಮುಖವಾಗಿದ್ದು, ಕೇರಳಕ್ಕೆ ಕೈಗಾರಿಕೆಗಳನ್ನು ತರುವುದು ಕೂಡ ಅಷ್ಟೇ ಮುಖ್ಯವಾದದ್ದಾಗಿದೆ ಎಂದು ಅವರು ತಮ್ಮ ಕಲ್ಪನೆಗಳ ಬಗ್ಗೆ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ