ಹಾಸನ: ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ಆರಂಭಿಸಿದ ಕೆಲವೇ ತಿಂಗಳಲ್ಲಿ ಶತಕೋಟಿ ಲಸಿಕೆ ಹಾಕಿಸಲಾಗಿದ್ದು, ಇದೀಗ ಆ ಬಗ್ಗೆ ಎಲ್ಲೆಡೆ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ಲಸಿಕೀಕರಣ ಶತಕೋಟಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯ ಕೆಂಪುಕೋಟೆಯಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಚರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶತಕೋಟಿ ಲಸಿಕೀಕರಣ ಕುರಿತ ವಿಶೇಷ ಗೀತೆ ಹಾಗೂ ದೃಶ್ಯಾವಳಿಯನ್ನು ಇಂದು ಬಿಡುಗಡೆ ಮಾಡಿದ್ದರು.
ಅಲ್ಲದೆ ದೇಶದ ಹಲವೆಡೆ ಶತಕೋಟಿ ಲಸಿಕೆ ಹಾಕಿಸಿರುವುದಕ್ಕೆ ಸಂತಸ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಹಲವರು ಈ ಬಗ್ಗೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದು, ಎಲ್ಲರೂ ಆದಷ್ಟು ಬೇಗ ಎರಡನೇ ಡೋಸ್ ಲಸಿಕೆಯನ್ನೂ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲೂ ಶತಕೋಟಿ ಲಸಿಕೀಕರಣದ ಸಂಭ್ರಮವನ್ನು ಆಚರಣೆ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಂಗೋಲಿ ಬಿಡಿಸಿ, ಕಚೇರಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ, ಬಣ್ಣಬಣ್ಣದ ಬಲೂನ್ಗಳನ್ನು ಹಾರಿಬಿಟ್ಟು ಸಂತೋಷ ವ್ಯಕ್ತಪಡಿಸಲಾಗಿದೆ. ಈ ಶತಕೋಟಿ ಲಸಿಕೀಕರಣದ ಸಂಭ್ರಮಾಚರಣೆಯನ್ನು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಉದ್ಘಾಟಿಸಿದ್ದು, ಡಿಎಚ್ಒ ಡಾ.ಸತೀಶ್, ಎಸ್ಪಿ ಆರ್. ಶ್ರೀನಿವಾಸ ಗೌಡ, ಸಿಇಒ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.
9 ವರ್ಷಗಳ ಬಳಿಕ ನಕ್ಸಲ್ ನಂಟು ಆರೋಪದಿಂದ ಮುಕ್ತರಾದ್ರು ವಿಠಲ ಮಲೆಕುಡಿಯ ಮತ್ತು ತಂದೆ; ಆರೋಪಮುಕ್ತಗೊಳಿಸಿದ ನ್ಯಾಯಾಲಯ