ಹುನಗುಂದ: ಪ್ರಪಂಚದಲ್ಲಿಯೇ ದೇಶದ ನ್ಯಾಯಾಂಗ ವ್ಯವಸ್ಥೆ ಅತ್ಯಂತ ವ್ಯವಸ್ಥಿತವಾಗಿದ್ದು, ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ದಿಕ್ಕಿನತ್ತ ವಕೀಲರು ಕಾರ್ಯ ಪ್ರವೃತ್ತರಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸೈಯ್ಯದ್ಇಬ್ರಾಹಿಂ ಅರಾತ್ ಹೇಳಿದರು.
ಪಟ್ಟಣದ ನ್ಯಾಯಾಲಯ ಸಭಾಭವನದಲ್ಲಿ ವಕೀಲರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ವಕೀಲರು ಮಾಡಬೇಕು. ಕಕ್ಷಿದಾರರಿಗೆ ನಿಜವಾಗಲೂ ಅನ್ಯಾಯವಾಗಿದ್ದರೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿ ಮತ್ತು ಪುರಾವೆಗಳನ್ನು ನ್ಯಾಯಯುತವಾಗಿದ್ದರೆ ಅಂಥವರಿಗೆ ನ್ಯಾಯಾಲಯದಿಂದ ಖಂಡಿತ ನ್ಯಾಯ ಸಿಗುತ್ತದೆ ಎಂದರು.
ಬಾರ್, ಬೆಂಚ್ ಮತ್ತು ನ್ಯಾಯಾಲಯದ ಸಿಬ್ಬಂದಿ ಕಾನೂನಿನ ಗೌರವ ಕಾಪಾಡಿಕೊಳ್ಳಬೇಕು. ಕರೊನಾ ಮಹಾಮಾರಿ ಕಾಯಿಲೆಗೆ ಸಾರ್ವಜನಿಕರು ಅಧಿಕಾರಿಗಳ ತೋರಿಕೆಗೆ ಮಾಸ್ಕ್ ಧರಿಸದೆ ಪರಸ್ಪರ ಹಿತ ಕಾಪಾಡಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಜಗದೀಶಗೌಡ ರುದ್ರೆ ಮಾತನಾಡಿ, ನ್ಯಾಯಾಧೀಶರಿಗಿಂತ ವಕೀಲರಿಗೆ ನ್ಯಾಯ ಯಾವುದು, ಅನ್ಯಾಯ ಯಾವುದು ಎಂಬವುದರ ಬಗ್ಗೆ ಮೊದಲೇ ತಿಳಿದಿರುತ್ತದೆ. ಅಂತಹ ಪ್ರಕರಣಗಳನ್ನು ನ್ಯಾಯಯುತವಾಗಿ ಬಗೆಹರಿಸುವ ಕೆಲಸ ಮಾಡಬೇಕು. ಇನ್ನು ಹೆಚ್ಚಿನ ವ್ಯಾಜ್ಯಗಳನ್ನು ಲೋಕ್ ಅದಾಲತ್ದಲ್ಲಿ ಇತ್ಯರ್ಥಕ್ಕೆ ಮುಂದಾಗಬೇಕು ಎಂದರು.
ವಕೀಲ ಸಂಘದ ಅಧ್ಯಕ್ಷ ಬ.ಎ. ಆವಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಕೀಲ ವಿ.ಆರ್. ಜನಾದ್ರಿ, ಎಸ್.ಎಸ್. ತಾರಿವಾಳ, ಸಿ.ಬಿ. ಸಜ್ಜನ, ಕೆ.ಎಂ, ಸಾರಂಗಮಠ, ವಿ.ಎಸ್.ಬಂಡಿ ಇತರರು ಇದ್ದರು. ವಕೀಲ ಸಂಘದ ಕಾರ್ಯದರ್ಶಿ ಎನ್.ಎಲ್. ತಹಸೀಲ್ದಾರ್ ಸ್ವಾಗತಿಸಿ, ನಿರೂಪಿಸಿದರು. ವೀರೇಶ ದಮ್ಮೂರಮಠ ವಂದಿಸಿದರು.