ಧಾರವಾಡ: ಯೂಟ್ಯೂಬ್ ನೋಡಿ ಕಳ್ಳತನ ಕಲಿತಿದ್ದ ಖತರ್ನಾಕ್ ಜೋಡಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ವೈಷ್ಣವಿ ಹಾಗೂ ಯುವರಾಜ್ ಎಂದು ಗುರುತಿಸಲಾಗಿದೆ.
ಈ ಖತರ್ನಾಕ್ ಜೋಡಿ ಯೂಟ್ಯೂಬ್ ನೋಡಿ ಕಳ್ಳತನ ಕಲಿತಿತ್ತು. ಬಳಿಕ ಧಾರವಾಡದಲ್ಲಿ ಕೋರ್ಟ್ ಸರ್ಕಲ್ ಬಳಿಯಿರುವ ಬೀರೇಶ್ವರ ಕೋ ಅಪರೇಟಿವ್ ಸೊಸೈಟಿಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಭಾರೀ ಮೊತ್ತದ ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡದ ಶಹರ ಠಾಣೆ ಪೊಲೀಸರು ತನಿಖೆ ನಡೆಸಿ, ಪ್ರಕರಣ ಭೇದಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಧಾರವಾಡದಲ್ಲಿ ಹೊಸ ವರ್ಷಾಚರಣೆಯ ದಿನವೇ ಕಳ್ಳತನ ನಡೆದಿತ್ತು. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ ಒಡೆತನದ ಹಾಗೂ ಯಕ್ಸಂಬಾದ ಸೊಸೈಟಿಗೆ ಸೇರಿದ ಧಾರವಾಡ ಶಾಖೆಯಲ್ಲಿ ವೈಷ್ಣವಿ ಮತ್ತು ಯುವರಾಜ್ ಸೇರಿ ಚಿನ್ನಾಭರಣ ಹಾಗೂ ನಗದು ಸೇರಿದಂತೆ 40 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದರು. ಘಟನೆ ನಡೆದ ಒಂದೇ ತಿಂಗಳಿಗೆ ಕಿಲಾಡಿ ಜೋಡಿ ಸಿಕ್ಕಿಬಿದ್ದಿದೆ.
ಆರೋಪಿಗಳ ಬಳಿಕ 615 ಗ್ರಾಂ ಚಿನ್ನಾಭರಣ ಹಾಗೂ 17.90 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಡಿ. 31ರ ರಾತ್ರಿ ಮತ್ತು ಜನವರಿ 1ರ ಮಧ್ಯೆ ನಡೆದಿದ್ದ ಕಳ್ಳತನ ಇದಾಗಿದೆ. ಆರೋಪಿ ಯುವರಾಜ್ ಮೂಲತಃ ಯಕ್ಸಂಬಾ ಗ್ರಾಮದವನು. ಅಲ್ಲದೆ, ಸೊಸೈಟಿಯ ಮಾಜಿ ಉದ್ಯೋಗಿ ಕೂಡ. ಆರೋಪಿ ವೈಷ್ಣವಿ, ಸೊಸೈಟಿಗೆ ಸಂಬಂಧಿಸಿದ ಪ್ರಮುಖರೊಬ್ಬರ ಪುತ್ರಿ.
ಯುವರಾಜ್, ವೈಷ್ಣವಿ ಜೊತೆ ಸ್ನೇಹ ಬೆಳೆಸಿ, ಕಳ್ಳತನಕ್ಕೆ ಪ್ಲ್ಯಾನ್ ಮಾಡಿದ್ದ. ಯುಟ್ಯೂಬ್ನಲ್ಲಿ ಬ್ಯಾಂಕ್ ದರೋಡೆ ವಿಡಿಯೋ ನೋಡಿ ತಯಾರಿ ನಡೆಸಿದ್ದ. ಸೊಸೈಟಿಯ ಶಟರ್ಸ್ ಮತ್ತು ಲಾಕರ್ ಕೀ ನಕಲಿ ಮಾಡಿಟ್ಟುಕೊಂಡು ಕಳ್ಳತನ ಎಸಗಿದ್ದ. ಸೊಸೈಟಿ ಒಳಗಿನ ಸಿಸಿ ಕ್ಯಾಮರಾ ಸುಟ್ಟು, ಡಿವಿಆರ್ ಸಹ ಹೊತ್ತೊಯ್ದಿದ್ದರು. ಜ. 2ರಂದು ಸಿಬ್ಬಂದಿ ಕರ್ತವ್ಯಕ್ಕೆ ಬಂದಿದ್ದಾಗ ಕಳ್ಳತನ ಬಯಲಿಗೆ ಬಂದಿತ್ತು.
ಸಾಕ್ಷ್ಯ ನಾಶ ಮಾಡಿದ್ದರಿಂದ ಇಷ್ಟು ದಿನ ಇಬ್ಬರು ಸೇಫ್ ಆಗಿದ್ದರು. ಆದರೂ ಪೊಲೀಸರ ಚಾಕಚಕ್ಯತೆಯಿಂದ ಇದೀಗ ಇಬ್ಬರು ಕಂಬಿ ಎಣಿಸುವಂತಾಗಿದೆ. (ಏಜೆನ್ಸೀಸ್)
ಇಂದಿನ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದ ಬಜೆಟ್ ಎದುರು ನೋಡುತ್ತಿದೆ: ಪ್ರಧಾನಿ ಮೋದಿ