ನವದೆಹಲಿ: ಇಂದಿನ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದ ಬಜೆಟ್ ಅನ್ನು ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಾಳೆ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಇಂದಿನಿಂದ ಸಂಸತ್ ಬಜೆಟ್ ಅಧಿವೇಶ ಆರಂಭವಾಗಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸಂಸತ್ ಮುಂಭಾಗ ಸುದ್ದಿಗಾರರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು.
ಬಜೆಟ್ ಅಧಿವೇಶನ ಇಂದು ಪ್ರಾರಂಭವಾಗುತ್ತದೆ ಮತ್ತು ಆರಂಭದಲ್ಲಿಯೇ ಇದು ವಿಶ್ವ ಆರ್ಥಿಕತೆಯ ವಿಶ್ವಾಸಾರ್ಹ ಧ್ವನಿಗಳು, ಸಕಾರಾತ್ಮಕ ಸಂದೇಶ, ಭರವಸೆಯ ಕಿರಣ ಮತ್ತು ಉತ್ಸಾಹದ ಆರಂಭವನ್ನು ಹೊತ್ತು ತಂದಿದೆ. ರಾಷ್ಟ್ರಪತಿಗಳು ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳು ಮಾಡುವ ಮೊದಲ ಭಾಷಣವು ನಮ್ಮ ಸಂವಿಧಾನಕ್ಕೆ ಮತ್ತು ವಿಶೇಷವಾಗಿ ಮಹಿಳೆಯರ ಗೌರವಕ್ಕೆ ಹೆಮ್ಮೆಯ ವಿಷಯವಾಗಿದೆ. ಇಡೀ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.
‘ಭಾರತ ಮೊದಲು ಪ್ರಜೆ ಮೊದಲು’ ಎಂಬ ಚಿಂತನೆ ಅಡಿಯಲ್ಲಿ ಸಂಸತ್ತಿನ ಈ ಬಜೆಟ್ ಅಧಿವೇಶನವನ್ನು ನಾವು ಮುಂದಕ್ಕೆ ಕೊಂಡೊಯ್ಯುತ್ತೇವೆ. ಪ್ರತಿಪಕ್ಷಗಳ ನಾಯಕರು ಸಹ ಸಂಸತ್ತಿನ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ನಡುವೆ, ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ. ಜಗತ್ತು ನೋಡುತ್ತಿರುವ ಭರವಸೆಯ ಕಿರಣವು ಪ್ರಕಾಶಮಾನವಾಗಿ ಬೆಳಗಲಿದೆ. ಇದಕ್ಕಾಗಿ ನಿರ್ಮಲಾ ಸೀತಾರಾಮನ್ ಪೂರ್ವ ತಯಾರಿ ನಡೆಸಿದ್ದು, ಎಲ್ಲರ ಆಶಯಗಳನ್ನು ಪೂರೈಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ದೃಢವಾಗಿ ನಂಬುತ್ತೇನೆ ಎಂದರು.
ನಮ್ಮ ಹಣಕಾಸು ಮಂತ್ರಿಯೂ ಓರ್ವ ಮಹಿಳೆ. ನಾಳೆ ಅವರು ದೇಶದ ಮುಂದೆ ಬಜೆಟ್ ಮಂಡಿಸಲಿದ್ದಾರೆ. ಇಂದಿನ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಭಾರತದ ಬಜೆಟ್ನತ್ತ ನೋಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. (ಏಜೆನ್ಸೀಸ್)