ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.
ನಿತ್ಯಾನಂದ
ಕಳೆದ ವರ್ಷ ಸೂರ್ಯ 40 ನಿಮಿಷ ತಡವಾಗಿ ಉದಯಿಸುವಂತೆ ಮಾಡಿದ್ದೆ. ಈ ವರ್ಷ ಆತ ಒಂದು ಗಂಟೆ ಬೇಗ ಮುಳುಗುವ ಹಾಗೆ ಮಾಡಿ ದಾಖಲೆ ಸೃಷ್ಟಿಸುವ ಸಂಕಲ್ಪ ಮಾಡಿದ್ದೇನೆ. ಮಂಗಳ ಗ್ರಹದಲ್ಲಿ ನನ್ನ ಆಶ್ರಮದ ಶಾಖೆ ತೆರೆಯುವ ಸಂಕಲ್ಪವೂ ಇದೆ. ಬಿಡದಿಯಲ್ಲಿ ಪೊಲೀಸರ ಕಾಟ ಮತ್ತು ಕ್ರಿಮಿನಲ್ ಕೇಸುಗಳು ಹೆಚ್ಚಾದ್ದರಿಂದ ಎಲ್ಲಾ ಕೇಸುಗಳನ್ನು ಇಲ್ಲೇ ಬಿಟ್ಟು ಒಂದು ಸೂಟ್ ಕೇಸ್ ಮಾತ್ರ ಹಿಡಿದುಕೊಂಡು ಆಯ್ದ ಶಿಷ್ಯೆಯರ ಜೊತೆ ಗೌಪ್ಯವಾಗಿ ಮಂಗಳನ ಅಂಗಳಕ್ಕೆ ಹಾರಿ ಹೋಗುತ್ತೇನೆ. ನಾನು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಲೈಂಗಿಕ ಹಿಂಸೆ ನೀಡಿರುವುದು ಸುಳ್ಳು. ನಾನು ನಿತ್ಯಾನಂದ ಪರಮಹಂಸನೇ ಹೊರತು ಪರಮಹಿಂಸನಲ್ಲ. ನನ್ನ ಲೈಂಗಿಕ ಹಗರಣಗಳೆಲ್ಲವೂ ಸುಳ್ಳು, ಅತಿ-ರಂಜಿತ!