ಬೆಂಗಳೂರು: ನಾಡಿದ ಹಿರಿಯ ಕವಿ, ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು 80ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ಈ ಸಂದರ್ಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ವತಿಯಿಂದ ಆಗಸ್ಟ್ 2ರಂದು ಸಂಜೆ 4.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಡಿನ ಪ್ರಸಿದ್ಧ ಗಾಯಕ-ಗಾಯಕಿಯರಿಂದ ಗೀತ ನಮನವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ದೊಡ್ಡರಂಗೇಗೌಡ, ನರಹಳ್ಳಿ ಬಾಲಸುಬ್ರಹ್ಮಣ್ಯ, ಟಿ.ಎನ್. ಸೀತಾರಾಂ, ನಾಗಾಭರಣ, ಬಿ.ಆರ್. ಲಕ್ಷ್ಮಣರಾವ್ ಮತ್ತು ಸಾಹಿತ್ಯ, ಸುಗಮ ಸಂಗೀತ, ರಂಗಭೂಮಿ, ಚಲನಚಿತ್ರ ರಂಗದ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ವೈ.ಕೆ. ಮುದ್ದುಕೃಷ್ಣ, ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಶ್ರೀನಿವಾಸ ಉಡುಪ, ಸಂಗೀತಾ ಕಟ್ಟಿ, ಅರ್ಚನಾ ಉಡುಪ, ಎಂ.ಡಿ. ಪಲ್ಲವಿ, ಪ್ರವೀಣ್ -ಪ್ರದೀಪ್, ನಾಗಚಂದ್ರಿಕಾ ಭಟ್, ಮಂಗಳಾ ರವಿ, ಸುಪ್ರಿಯಾ ರಘುನಂದನ್, ಸುನೀತಾ, ಕೆ.ಎಸ್. ಸುರೇಖಾ ಮತ್ತಿತರ ಸುಗಮ ಸಂಗೀತ ಗಾಯಕರು ಗೀತ ನಮನವನ್ನು ಸಲ್ಲಿಸಲಿದ್ದಾರೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ.ವಿ. ತಿಳಿಸಿದ್ದಾರೆ.