More

    ಸಂಪಾಜೆ ಚಟ್ಟೆಕಲ್ಲಿನಲ್ಲಿ ಮಾರಕಾಸ್ತ್ರ ತೋರಿಸಿ ಮನೆ ದರೋಡೆ

    ಸುಳ್ಯ: ತಾಲೂಕಿನ ಸಂಪಾಜೆ ಚಟ್ಟೆಕಲ್ಲಿನಲ್ಲಿ ಭಾನುವಾರ ರಾತ್ರಿ ಅಂಬರೀಶ್ ಭಟ್ ಎಂಬುವರ ಮನೆಗೆ ನುಗ್ಗಿದ ಆರು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರ ತೋರಿಸಿ 5.5 ಲಕ್ಷ ರೂ. ನಗ, ನಗದು ದೋಚಿ ಪರಾರಿಯಾಗಿದೆ.

    ಅಂಬರೀಶ್ ಭಟ್ ಮತ್ತು ಪುತ್ರ ಶ್ರೀವತ್ಸ ಮಡಿಕೇರಿಗೆ ಪೌರೋಹಿತ್ಯ ನಡೆಸಲು ಹೋಗಿದ್ದರು. ರಾತ್ರಿ 8.30ರ ವೇಳೆಗೆ ನಾಯಿ ಬೊಗಳಿದ ಸದ್ದು ಕೇಳಿದಾಗ ಅಂಬರೀಶ್ ಭಟ್ ಅವರ ಸೊಸೆ ಆಶಾ ಭಟ್ ಮನೆಯಿಂದ ಹೊರಬಂದಿದ್ದರು. ಈ ವೇಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಆರು ಜನರ ತಂಡ ಆಶಾ ಭಟ್ ಕೊರಳಿಗೆ ಕೈ ಹಾಕಿ ಮಂಗಳಸೂತ್ರ ಕಸಿದುಕೊಂಡಿದೆ. ಬಳಿಕ ಮನೆಯಲ್ಲಿದ್ದ ಅಂಬರೀಶ್ ಭಟ್ ಅವರ ತಾಯಿ, ತಂದೆ, ಪತ್ನಿ ಹಾಗೂ ಸೊಸೆಯರನ್ನು ಬೆದರಿಸಿ ಕಪಾಟಿನ ಬೀಗದ ಕೀ ಪಡೆದುಕೊಂಡು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

    ಭಟ್ ಅವರ ಮಗ ಶ್ರೀವತ್ಸ ಹಾಗೂ ಸೊಸೆ ಆಶಾ ಭಟ್ ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಬಂದಿದ್ದರು. ದರೋಡೆಕೋರರಲ್ಲಿ ಒಬ್ಬ ಮಾತ್ರ ನಲ್ವತ್ತರಿಂದ ಐವತ್ತು ವರ್ಷದ ವ್ಯಕ್ತಿಯಾಗಿದ್ದು ಉಳಿದ ಐದು ಜನರು 20ರಿಂದ 30 ವರ್ಷದೊಳಗಿನವರಾಗಿದ್ದರು. ಅವರೆಲ್ಲರೂ ಪರಸ್ಪರ ತಮಿಳಿನಲ್ಲೇ ಮಾತನಾಡುತ್ತಿದ್ದರು ಎಂದು ಆಶಾ ಭಟ್ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಶ್ವಾನ ದಳ, ಬೆರಳಚ್ಚು ತಂಡಗಳು ತನಿಖೆ ನಡೆಸುತ್ತಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತೊಟ್ಟಿಲು ಮುಟ್ಟದ ಕಳ್ಳರು: ಘಟನೆ ವೇಳೆ ಅವರ ಅವಳಿ ಮಕ್ಕಳು ಆಗ ತಾನೇ ತೊಟ್ಟಿಲಲ್ಲಿ ಮಲಗಿದ್ದರು. ಮಕ್ಕಳಿಗೆ ಏನೂ ಮಾಡಬೇಡಿ ಎಂದು ಗೋಗರೆದ ಕಾರಣ ದುಷ್ಕರ್ಮಿಗಳು ಮಕ್ಕಳಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts