ಚೆನ್ನೈ: ಇಡ್ಲಿಗೆ ಹೆಚ್ಚುವರಿ ಸಾಂಬಾರ್ ಕೊಡಲಿಲ್ಲ ಅಂತಾ ಅಪ್ಪ-ಮಗ ಇಬ್ಬರು ಸೇರಿಕೊಂಡು ಹೋಟೆಲ್ ಮೇಲ್ವಿಚಾರಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಪಲ್ಲಾವರಂ ಬಳಿಯ ಪಮ್ಮಳ್ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಅರುಣ್ (29) ಕೊಲೆಯಾದ ಸೂಪರ್ವೈಸರ್. ಶಂಕರ್ (55) ಮತ್ತು ಅವನ ಪುತ್ರ ಅರುಣ್ ಕುಮಾರ್ (30) ಹತ್ಯೆಗೈದ ಆರೋಪಿಗಳು.
ಅಪ್ಪ-ಮಗ ಇಬ್ಬರು ಇಡ್ಲಿ ಕೊಂಡೊಯ್ಯಲೆಂದು ಅನಕಪುತ್ತೂರಿನ ಪರಿ ನಗರದಲ್ಲಿರುವ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಆರ್ಡರ್ ಮಾಡಿದ ಇಡ್ಲಿಯನ್ನು ಪಡೆದುಕೊಂಡ ಬಳಿಕ ಇಬ್ಬರು ಹೆಚ್ಚುವರಿ ಸಾಂಬಾರ್ ಕೊಡುವಂತೆ ಸಿಬ್ಬಂದಿ ಬಳಿ ಕೇಳಿದ್ದಾರೆ. ಆದರೆ, ನಮ್ಮಲ್ಲಿ ಹೆಚ್ಚುವರಿ ಸಾಂಬಾರ್ ಪಾಕೆಟ್ಗಳನ್ನು ಕೊಡುವುದಿಲ್ಲ ಎಂದು ಸಿಬ್ಬಂದಿ ಹೇಳಿದಾಗ ಇಬ್ಬರು ವಾಗ್ವಾದಕ್ಕೆ ಇಳಿದು ಹೈಡ್ರಾಮ ಮಾಡಿದರು.
ಇದಾದ ಬಳಿಕ ಅಪ್ಪ-ಮಗ ರೆಸ್ಟೋರೆಂಟ್ನಿಂದ ಹೊರನಡೆದು ವಾಹನ ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಸೆಕ್ಯುರಿಟಿ ಬೇಗ ವಾಹನ ತೆಗೆಯುವಂತೆ ಹೇಳಿದಾಗ ಆಕ್ರೋಶಗೊಂಡ ಅಪ್ಪ-ಮಗ ಸೆಕ್ಯುರಿಟಿ ಮೇಲೆಯೇ ಹಲ್ಲೆ ಮಾಡಿದ್ದಾರೆ. ಇದನ್ನು ಗಮನಿಸಿದ ಸೂಪರ್ವೈಸರ್ ಅರುಣ್, ಸ್ಥಳಕ್ಕೆ ಧಾವಿಸಿ ಹಲ್ಲೆಯನ್ನು ತಡೆಯಲು ಯತ್ನಿಸಿದರು. ಆದರೆ, ಆರೋಪಿ ಅರುಣ್ ಕುಮಾರ್, ಅರುಣ್ ತಲೆ, ಹಣೆ ಮತ್ತು ಕುತ್ತಿಗೆ ಮೇಲೆ ಬಲವಾಗಿ ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲಿಯೇ ಅರುಣ್ ಪ್ರಜ್ಞೆ ತಪ್ಪಿ ಬಿದ್ದರು.
ಇದನ್ನು ಗಮನಿಸಿದ ದಾರಿಹೋಕರು ಕೂಡಲೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಅರುಣ್ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅರುಣ್ ಮೃತಪಟ್ಟಿದ್ದರು.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಶಂಕರ್ ನಗರ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಾದ ಶಂಕರ್ ಮತ್ತು ಅರುಣ್ಕುಮಾರ್ನನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಸೂಪರ್ವೈಸರ್ ಅರುಣ್ ತಂಜೂರಿನವರಾಗಿದ್ದು, ಚೆನ್ನೈಗೆ ಬಂದು ಕಳೆದ ಕೆಲವು ವರ್ಷಗಳಿಂದ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅರುಣ್ ತನ್ನ ಪ್ರಿಯಕರ ಪವಿತ್ರಾಳನ್ನು ಮದುವೆಯಾಗಿ ಪೊಜಿಚಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಮದ್ವೆಯಾದ ಕೆಲವೇ ತಿಂಗಳಲ್ಲಿ ನಟಿಯ ಕಳ್ಳಾಟ ಗಂಡನಿಂದಲೇ ಬಯಲು: ಮನೆಯ ಕಬೋರ್ಡ್ನಲ್ಲಿ ಕಾಂಡೋಮ್ಸ್ ಪತ್ತೆ
ತುಕಾಲಿ ಸಂತೋಷ್ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು