ಹೊಸಪೇಟೆ: ನೌಕರ ವಿರೋಧಿ ಎನ್ಪಿಎಸ್ ಯೋಜನೆ ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಯೋಜನೆ ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ್ ವಿಶ್ವಜೀತ್ ಮೆಹತಾಗೆ ಮನವಿ ಸಲ್ಲಿಸಿ, ನೌಕರರು ದೀರ್ಘಾವಧಿಗೆ ಮಾಡಿದ ಸೇವೆ ಮಾಡಿದರೂ ಎನ್ಪಿಎಸ್ನಿಂದ ನಿಶ್ಚಿತ ಪಿಂಚಣಿ ದೊರೆಯುವುದಿಲ್ಲ. ನಿವೃತ್ತಿಯ ಇಳಿ ವಯಸ್ಸಿನಲ್ಲಿ ಎನ್ಪಿಎಸ್ನಿಂದ ಬಿಡಿಗಾಸು ದೊರೆಯುತ್ತದೆ. ಸರ್ಕಾರಿ ನೌಕರರ ಹಣ ಖಾಸಗೀ ಕಂಪನಿಗಳ ಷೇರು ಖರೀದಿಗೆ ವಿನಿಯೋಗವಾಗುತ್ತಿದ್ದು, ಷೇರು ಮಾರುಕಟ್ಟೆಯು ಜೂಜುಕೋರ ವ್ಯವಸ್ಥೆಯಾಗಿರುವುದರಿಂದ, ನಿವೃತ್ತಿಯಾಗುತ್ತಿರುವ ನೌಕರರಿಗೆ, ಮರಣ ಹೊಂದಿರುವರ ಕುಟುಂಬಕ್ಕೆ ಮಾಸಿಕ 2,000- 3,000 ರೂ. ಪಿಂಚಣಿ ದೊರೆಯುತ್ತಿದೆ. ಇದು ಮನೆಯ ಬಾಡಿಗೆಯಿರಲಿ, ವಿದ್ಯುತ್ ಮತ್ತು ನೀರಿನ ಶುಲ್ಕ ಕಟ್ಟಲು ಸಾಕಾಗುವುದಿಲ್ಲ ಎಂದು ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಎನ್ಪಿಎಸ್ ರದ್ದುಗೊಳಿಸಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಡಿ. 19 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಕೆಲ ಮಹಿಳಾ ನೌಕರರು ತಮ್ಮ ಪುಟ್ಟ ಮಕ್ಕಳೊಂದಿಗೆ ಹಗಲಿರುಳು ಹೋರಾಟದಲ್ಲಿ ತೊಡಗಿದ್ದಾರೆ. ಆ ಮೂಲಕ ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಪಿಂಚಣಿ ಎಂಬುವುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ತಕ್ಷಣವೇ ರಾಜ್ಯ ಸರ್ಕಾರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.