ಹೊಸನಗರ: ರಕ್ತ ಸಂಬಂಧಗಳ ಮಹತ್ವ ಕಳಚಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ಅಕ್ಷರ ಕಲಿಕೆ ಜತೆಗೆ ಸಂಬಂಧಗಳ ಮಹತ್ವ ತಿಳಿಸುವ ಕಾರ್ಯವಾಗಬೇಕಿದೆ ಎಂದು ಮುಖ್ಯಶಿಕ್ಷಕಿ ರತ್ನಾಕುಮಾರಿ ಹೇಳಿದರು.
ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ‘ಶಾಲೆಯಲ್ಲಿ ಮಗುವಿನೊಂದಿಗೆ ಅಜ್ಜ-ಅಜ್ಜಿ’ ವಿಶೇಷ ದಿನ ಆಚರಿಸಿ ಮಾತನಾಡಿದರು.
ಓದಿನ ಗುರಿ ಕೇವಲ ಹಣ ಗಳಿಕೆಯ ಮೂಲ ಎನ್ನುವ ಕಲ್ಪನೆ ಬಂದಿರುವ ಪರಿಣಾಮ ಓದು, ಉದ್ಯೋಗ, ಸಂಬಳ… ವರ್ತುಲದೊಳಗೆ ಯುವಜನತೆ ಸಿಲುಕಿದ್ದಾರೆ. ಆದರೆ ಓದಿನ ಜತೆಗೆ ಸಂಬಂಧಗಳ ಪ್ರಾಮುಖ್ಯದ ಅರಿವಿನ ಅಗತ್ಯವಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿತವರಿಗೆ ಮುಂದೆ ಯಶಸ್ಸು ನಿಶ್ಚಿತ ಎಂದರು.
ಶಿಕ್ಷಣ ತಜ್ಞ ಶ್ರೀಧರಮೂರ್ತಿ, ನಾಗಭೂಷಣ ರಾವ್, ಅನಂತರಾವ್, ಶಿಕ್ಷಕರಾದ ಅಂಬಿಕಾ, ದಿನೇಶ್, ಕಾವ್ಯಾ, ಶಶಿಕಲಾ ಮತ್ತಿತರರಿದ್ದರು.