ಹೊಸದುರ್ಗ: ಗುಜರಾತ್ನಿಂದ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ ತಬ್ಲಿಘಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿರುವುದು ನೋವಿನ, ಅಘಾತಕಾರಿ ಸಂಗತಿ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಮಠದಲ್ಲಿ ಶುಕ್ರವಾರ ಈ ಕುರಿತು ಮಾತನಾಡಿದ ಶ್ರೀಗಳು, ಹಸಿರು ವಲಯದಲ್ಲಿದ್ದ ಚಿತ್ರದುರ್ಗದಲ್ಲಿ ಈಗ ಸೋಂಕು ಕಾಣಿಸಿಕೊಂಡಿರುವುದು ದುರದೃಷ್ಟಕರ ಸಂಗತಿ ಎಂದರು.
ಗುಜರಾತಿನಿಂದ ಬಂದ ತಬ್ಲಿಘಿಗಳನ್ನು ನಗರದಿಂದ ಹೊರಗಿಡುವ ಕೆಲಸವನ್ನು ಜಿಲ್ಲಾಡಳಿತ ಮೊದಲೇ ಮಾಡಬೇಕಿತ್ತು. ಹಸಿರು ವಲಯದಿಂದ ಕೆಂಪು ವಲಯಕ್ಕೆ ಜಿಲ್ಲೆ ಜಾರುತ್ತಿರುವುದು ನೋವು, ಆತಂಕ ತಂದಿದೆ.
ಸೋಂಕಿತರನ್ನು ನಗರಕ್ಕೆ ಪ್ರವೇಶಿಸಲು ಬಿಟ್ಟಿದ್ದು ಹಾಗೂ ಅವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದು ತಪ್ಪು. ಈ ಕುರಿತು ಜಿಲ್ಲಾಡಳಿತ ಈಗಲಾದರೂ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಸೋಂಕಿತರನ್ನು ಪಟ್ಟಣದಿಂದ ಹೊರಕ್ಕೆ ಸ್ಥಳಾಂತರಿಸುವ ವೆಚ್ಚವನ್ನು ಭರಿಸುವುದಾಗಿ ತಿಳಿಸಿರುವ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಹೇಳಿಕೆ ಸರಿಯಿದ್ದು, ಜಿಲ್ಲಾಡಳಿತ ರಾಜಕಾರಣಿಗಳ, ಮಠಾಧೀಶರ ಸಲಹೆ ಪಡೆಯುವುದು ಉತ್ತಮ ಎಂದು ಹೇಳಿದರು.