ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ. ನಾನೊಬ್ಬಳೇ ಇದ್ದೀನಿ ಬಾ… ಎಂದಾಕೆಯ ಮಾತಿಗೆ ಮರುಳಾಗಿ ಹೋದವನಿಗೆ ಅಲ್ಲಿ ಆಗಿದ್ದೇ ಬೇರೆ. ವಿಡಿಯೋ ಕಾಲ್ ಮಾಡಿಕೊಂಡು ಯುವತಿಯನ್ನ ನೋಡಲೆಂದು ಮೂರನೇ ಮಹಡಿಗೆ ಹೋದಾತನಿಗೆ ನರಕ ದರ್ಶನವಾಗಿದೆ. ಅವರ ಕಾಟ ಸಹಿಸಲಾಗದೆ ಸುದ್ದುಗುಂಟೆಪಾಳ್ಯದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈತನ ದೂರಿನ ಮೇರೆಗೆ ಪೊಲೀಸರು ಬೆಂಗಳೂರಿನಲ್ಲಿ ಯುವತಿ-ಈಕೆಯ ಪ್ರಿಯಕರ ಸೇರಿ ಐವರನ್ನ ಬಂಧಿಸಿದ್ದಾರೆ.
ಏನಿದು ಪ್ರಕರಣ?: ಕಳೆದ ಅಕ್ಟೋಬರ್ ತಿಂಗಳಲ್ಲಿ ಒಂದು ದಿನ ರಾತ್ರಿ ಸಮಯದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ತೆರುಪೇಟೆಯ ದಿಲೀಪ್ಕುಮಾರ್(32) ಮೊಬೈಲ್ಗೆ ಅಪರಿಚಿತ ನಂಬರ್ನಿಂದ ಹಾಯ್ ಎಂದು ಮೆಸೇಜ್ ಬಂದಿತ್ತು. ಹೆಸರು, ವಿಳಾಸ ಕೇಳಿದಾಗ ಯುವತಿ, ತಾನು “ಪ್ರಿಯಾ” ಎಂದು ಪರಿಚಯಿಸಿಕೊಂಡು ‘ತಮಿಳುನಾಡು ಮೂಲದವಳು. ಸದ್ಯ ಕೆಲಸ ಹುಡುಕುವ ಸಲುವಾಗಿ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ನೆಲೆಸಿದ್ದೇನೆ’ ಎಂದು ಚಾಟ್ ಶುರು ಮಾಡಿದ್ದಾಳೆ. ಫೇಸ್ಬುಕ್ನಲ್ಲೂ ಫ್ರೆಂಡ್ ಆಗಿದ್ದಾಳೆ.
ಇದಾದ ಮೇಲೆ ಅ.27ರಂದು ಸಲುಗೆಯಿಂದ ಮಾತನಾಡಲು ಶುರು ಮಾಡಿದ ಯುವತಿ, ‘ಮನೆಯಲ್ಲಿ ಯಾರೂ ಇಲ್ಲ. ಒಬ್ಬಳೇ ಇದ್ದೇನೆ. ಇಬ್ಬರೂ ಭೇಟಿ ಮಾಡೋಣ ಬಾ’ ಎಂದು ಕರೆದಿದ್ದಾಳೆ. ಕೆಲಸ ಇದ್ದ ಕಾರಣಕ್ಕೆ ದಿಲೀಪ್ಕುಮಾರ್, ಅಂದು ಯುವತಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಮಾರನೇ ದಿನ ಮತ್ತೆ ಬೆಳಗ್ಗೆ 9 ಗಂಟೆಗೆ ದಿಲೀಪ್ಕುಮಾರ್ಗೆ ಕರೆ ಮಾಡಿದ ಯುವತಿ, ‘ಮನೆಯಲ್ಲಿ ಯಾರೂ ಇಲ್ಲ, ಬಾ’ ಎಂದು ಲೊಕೇಷನ್ ಕಳುಹಿಸಿದ್ದಾಳೆ. ದಿಲೀಪ್ ಮಧ್ಯಾಹ್ನ 12 ಗಂಟೆಗೆ ಹೊಸೂರಿನಿಂದ ಹೊರಟು ಬರುವಾಗ ಯುವತಿ ಪದೇಪದೆ ಕರೆ ಮಾಡಿ ‘ಎಲ್ಲಿದ್ದೀಯಾ? ಎಷ್ಟೊತ್ತಿಗೆ ಬರುತ್ತೀಯಾ?’ ಎಂದು ವಿಚಾರಿಸಿಕೊಂಡಿದ್ದಾಳೆ. ಇದಕ್ಕೆ ವಿಡಿಯೋ ಕಾಲ್ ಮಾಡಿ ತಾನಿರುವ ಸ್ಥಳವನ್ನು ದಿಲೀಪ್ ತೋರಿಸಿದ್ದಾನೆ. ಮಧ್ಯಾಹ್ನ 1.30ಕ್ಕೆ ಆಕೆಯ ಮನೆ ಸಮೀಪ ಬಂದು ಕಾರು ಪಾರ್ಕ್ ಮಾಡುತ್ತಿದ್ದಂತೆ, ಅದನ್ನು ನೋಡಿದ ಯುವತಿ ಈತನಿಗೆ ಕರೆ ಮಾಡಿ, ಒಬ್ಬನೇ ಬಂದಿರುವ ಬಗ್ಗೆ ಖಚಿತ ಪಡಿಸಿಕೊಂಡು 3ನೇ ಮಹಡಿಯಿಂದ ಕೈ ಬೀಸಿ ಕರೆದಿದ್ದಾಳೆ.
ಯುವತಿ ಇದ್ದ 3ನೇ ಮಹಡಿ ಮನೆಗೆ ದಿಲೀಪ್ ಕುಮಾರ್ ಹೋಗುತ್ತಿದ್ದಂತೆ ನಾಲ್ವರು ಆರೋಪಿಗಳು ಹಿಡಿದು ಹಲ್ಲೆ ನಡೆಸಿ ‘ನೀನು ಯಾರೋ? ಏಕೆ ಬಂದಿದ್ದೀಯಾ? ನಿನ್ನನ್ನು ಕರೆದಿರುವುದು ಯಾರು?’ ಎಂದು ಏರುಧ್ವನಿಯಲ್ಲಿ ದಬಾಯಿಸಿದ್ದಾರೆ. ಯುವತಿ ಆಹ್ವಾನ ನೀಡಿದ ಬಗ್ಗೆ ದಿಲೀಪ್ ವಿವರಿಸಿದಾಗ ‘ನೀನು ಯಾವ ಕೆಲಸಕ್ಕೆ ಬಂದಿದ್ದೀಯಾ?’ ಎಂದು ನಮಗೆ ಗೊತ್ತು ಎನ್ನುತ್ತಾ ಮನಸೋಇಚ್ಛೆ ಥಳಿಸಿ ದಿಲೀಪ್ರ ಜೇಬಿನಲ್ಲಿದ್ದ ಐಫೋನ್, ಕಾರಿನ ಕೀ, 26 ಸಾವಿರ ರೂ. ಕಸಿದುಕೊಂಡಿದ್ದಾರೆ.
ಇದಾದ ಮೇಲೆ ಯುವತಿಯ ಅಕ್ಕಪಕ್ಕ ನಿಲ್ಲಿಸಿ ಅರೆನಗ್ನ ವಿಡಿಯೋ ಸೆರೆ ಹಿಡಿದುಕೊಂಡು 1 ಲಕ್ಷ ರೂ.ಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ‘ಹಣ ಕೊಡದಿದ್ದರೆ ನಿನ್ನ ಹೆಂಡತಿಗೆ ಈ ವಿಡಿಯೋ ಕಳುಹಿಸುತ್ತೇವೆ’ ಎಂದು ಬೆದರಿಕೆವೊಡ್ಡಿದ್ದಾರೆ. ಭಯಗೊಂಡ ದಿಲೀಪ್ಕುಮಾರ್, ತನ್ನ ಅಣ್ಣನಿಗೆ ಕರೆ ಮಾಡಿ 25 ಸಾವಿರ ರೂ. ಮತ್ತು ಸ್ನೇಹಿತನಿಂದ 25 ಸಾವಿರ ರೂ. ಆನ್ಲೈನ್ನಲ್ಲಿ ವರ್ಗಾವಣೆ ಮಾಡಿಸಿಕೊಂಡು ಆರೋಪಿಗಳಿಗೆ ಕೊಟ್ಟಿದ್ದಾನೆ. ನಂತರ ಆರೋಪಿಗಳು, ದಿಲೀಪ್ನನ್ನು ಬಿಟ್ಟು ಕಳುಹಿಸಿದ್ದರು. ಮಾರನೇ ದಿನ ಮತ್ತೆ ಕರೆ ಮಾಡಿದ ಆರೋಪಿಗಳು 60 ಸಾವಿರ ರೂ. ನೀಡಿದರೆ ಮಾತ್ರ ಕಾರನ್ನು ವಾಪಸ್ ಕೊಡುವುದಾಗಿ ದಿಲೀಪ್ಗೆ ಹೆದರಿಸಿದ್ದಾರೆ. ಈ ಬಗ್ಗೆ ಸ್ನೇಹಿತನ ಬಳಿ ದಿಲೀಪ್ಕುಮಾರ್ ನೋವು ಹಂಚಿಕೊಂಡಾಗ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಕೇಸ್ನಲ್ಲಿ ಬಿಟಿಎಂ ಲೇಔಟ್ ನಿವಾಸಿಗಳಾದ ಹಲೀಮಾ ಅಲಿಯಾಸ್ ಪ್ರಿಯಾ, ಝಹೀದ್, ಮುಕ್ತಿಹಾರ್, ಫಾರನ್ ಮತ್ತು ಇಸ್ಲಾಮ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಹಣ, ಕಾರು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ.
ಪ್ರಿಯಕರನೇ ಸಾಥ್ : ಬಂಧಿತ ಹಲೀಮಾ ಅಲಿಯಾಸ್ ಪ್ರಿಯಾ ಮತ್ತು ಝಹೀದ್ ಪ್ರೇಮಿಗಳು. ಸುಲಭವಾಗಿ ಹಣ ವಸೂಲಿ ಮಾಡುವ ಉದ್ದೇಶಕ್ಕೆ ಝಹೀದ್, ತನ್ನ ಪ್ರೇಯಸಿ ಮೂಲಕ ದಿಲೀಪ್ಕುಮಾರ್ಗೆ ಕರೆ ಮಾಡಿಸಿ ಸಲುಗೆಯಿಂದ ಮಾತನಾಡುವಂತೆ ಹೇಳಿದ್ದ. ಆನಂತರ ತನ್ನ ಮನೆಗೆ ಪ್ರೇಯಸಿಯನ್ನು ಕರೆಸಿಕೊಂಡು ಅಲ್ಲಿಗೆ ದಿಲೀಪ್ಕುಮಾರ್ನನ್ನು ಬರುವಂತೆ ಹೇಳಿ ಬಂದ ಮೇಲೆ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಕೃತ್ಯ: ಇದೇ ರೀತಿ ಯುವತಿ ಮೂಲಕ ಅಮಾಯಕರಿಗೆ ಬಲೆ ಬೀಸಿ ತಮ್ಮ ಜಾಗಕ್ಕೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದಾರೆ. ಮರ್ಯಾದೆಗೆ ಹೆದರಿ ಹಣ ಕೊಟ್ಟು ಪೊಲೀಸರಿಗೆ ದೂರು ಕೊಡದೆ ಸುಮ್ಮನಾಗಿದ್ದಾರೆ. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇದರ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.