More

    ಬಿರುಗಾಳಿ, ಮಳೆಗೆ ಮನೆಗಳು ಜಖಂ

    ಮದ್ದೂರು: ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಬಿರುಗಾಳಿ ಮಳೆಗೆ ಹಲವಾರು ಮನೆಗಳು ಜಖಂಗೊಂಡಿವೆ.

    ಗ್ರಾಮದ ಶಿವಣ್ಣ ಅವರ ಪೆಟ್ಟಿ ಅಂಗಡಿಯ ಛಾವಣಿ ಹಾರಿಹೋಗಿ ವಿದ್ಯುತ್ ಕಂಬಕ್ಕೆ ಹೊಡೆದು ಶಿವು ಅವರ ಹೆಂಚಿನ ಮನೆಯ ಮೇಲೆ ಕಂಬ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಹೊನ್ನಯ್ಯ ಅವರ ಮನೆಗೆ ನೀಲಗಿರಿ ಮರಗಳು ಬಿದ್ದು ಮನೆ ಜಖಂಗೊಂಡಿದೆ. ಅಂಕಪ್ಪ, ಜಯಮ್ಮ, ಮಿಣಕಮ್ಮ, ಶೇಖರ್, ಕೃಷ್ಣ, ವರದರಾಜು ಸೇರಿದಂತೆ ಹಲವಾರು ಮನೆಗಳ ಛಾವಣಿ ಹಾಗೂ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಮರಗಳು ಧರೆಗುರಳಿದ್ದು, ಅದೃಷ್ಟವಶಾತ್ ವಿದ್ಯುತ್ ಕಡಿತಗೊಂಡಿದ್ದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ.

    ಬಾಳೆ ತೋಟ ನಾಶ: ಬ್ಯಾಡರಹಳ್ಳಿ ಚಂದ್ರಶೇಖರ ಅವರ ಬಾಳೆ ತೋಟ ಸಂಪೂರ್ಣ ನಾಶವಾಗಿದ್ದು, ಅಂದಾಜು 4 ಲಕ್ಷ ರೂ. ನಷ್ಟವಾಗಿದೆ. ಕಷ್ಟಪಟ್ಟು ಬೆಳೆದಿದ್ದ ಏಲಕ್ಕಿ ಬಾಳೆ ಬಿರುಗಾಳಿ ಮಳೆಗೆ ನಾಶವಾಗಿದೆ. ಜತೆಗೆ ಪಂಪ್‌ಸೆಟ್‌ಗಳ ವಿದ್ಯುತ್ ಕಂಬಗಳು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಆದ್ದರಿಂದ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮುಖಂಡ ಬ್ಯಾಡರಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts