ಹೊಳಲ್ಕೆರೆ: ಶಿಸ್ತು ಮತ್ತು ಸೇವೆಯ ಪ್ರತೀಕವಾಗಿದ್ದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಮೌಲ್ಯಗಳ ಪ್ರತಿಪಾದನೆ ಅಗತ್ಯವಿದೆ ಎಂದು ಮದರ್ ತೆರೇಸಾ ಪ್ರಶಸ್ತಿ ಪುರಸ್ಕೃತ ಕೆ.ನಾಗರಾಜ್ ಹೇಳಿದರು.
ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆವರಣದಲ್ಲಿ ಸೋಮವಾರ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರೀ ರಾಘವೇಂದ್ರ ಸ್ವಾಮೀಜಿ ಅವರು ಯೋಗ, ಆಯುರ್ವೇದ ಮತ್ತು ಶಿಕ್ಷಣದ ಮೂಲಕ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು ಎಂದರು.
ಮುಖಂಡ ಆರ್.ಎಸ್.ರಾಜ್ಕುಮಾರ್ ಮಾತನಾಡಿ, ಅಂದಿನ ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದು, ಅದೇ ಕಾರಣಕ್ಕಾಗಿ ಸಮಾನದಲ್ಲಿ ಗೌರವ ಸಿಗುತ್ತಿದೆ ಎಂದು ತಿಳಿಸಿದರು.
ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯ ಡಾ.ಕೆ.ವಿ.ರಾಜಶೇಖರ್ ಮಾತನಾಡಿ, ಮಲ್ಲಾಡಿಹಳ್ಳಿಯಲ್ಲಿ ಶ್ರೀಗಳ ಆಯುರ್ವೇದ ಚಿಕಿತ್ಸೆ, ಯೋಗ ಪದ್ಧತಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಜಂಟಿ ಕಾರ್ಯದರ್ಶಿ ಡಾ.ಎಸ್.ಪಿ.ರವಿ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ರವಿ, ಕಾರ್ಯದರ್ಶಿ ಎ.ಎಸ್.ಅಶೋಕ್, ಖಜಾಂಚಿ ಉಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಟಿ.ಪಿ.ಬಸವರಾಜ್ ಇತರರಿದ್ದರು.