ಹಿರಿಯೂರು: ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ವಿಷಯದ ಬಗೆಗಿನ ಭಯ ಹೋಗಲಾಡಿಸಿ ಆತ್ಮಸ್ಥೈರ್ಯ ನೀಡಲು ಗಣಿತ ಸ್ಪರ್ಧೆ ಪೂರಕವಾಗಿದೆ ಎಂದು ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ತಿಳಿಸಿದರು.
ಶಿಕ್ಷಣ ಇಲಾಖೆ, ಗ್ರಾಪಂ, ಅಕ್ಷರ ಫೌಂಡೇಶನ್ ಆಶ್ರಯದಲ್ಲಿ ಗ್ರಾಪಂ ಮಟ್ಟದ ಸರ್ಕಾರಿ ಶಾಲಾ ಮಕ್ಕಳಿಗೆ ತಾಲೂಕಿನ ವಾಣಿವಿಲಾಸಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಕರಗಳ ಸಹಾಯದಿಂದ ಬೋಧಿಸುವುದರಿಂದ ಗಣಿತವನ್ನು ಸರಳವಾಗಿ ಅರ್ಥಮಾಡಿಸಬಹುದಾಗಿದೆ. ಇದರ ಜತೆಗೆ ಸರಳ ಸೂತ್ರ ಅನುಸರಿಸಿದರೆ ಗಣಿತದಷ್ಟು ಸುಲಭ ವಿಷಯ ಯಾವುದೂ ಇರುವುದಿಲ್ಲ. ಕಷ್ಟ ಎನಿಸುವ ವಿಷಯಗಳ ಕಡೆ ಹೆಚ್ಚಿನ ಗಮನ ಹರಿಸಿದರೆ ಎಲ್ಲವೂ ಸಲೀಸಾಗುತ್ತದೆ ಎಂದು ಸಲಹೆ ನೀಡಿದರು.
ಬಿಇಒ ಪಿ.ರಾಮಯ್ಯ ಮಾತನಾಡಿ, ಮಕ್ಕಳಿಗೆ ಕ್ಲಿಷ್ಟವೆನಿಸುವಂತಹ ವಿಷಯಗಳನ್ನು ಸರಳ ವಿಧಾನಗಳ ಮೂಲಕ ಕಲಿಸುವ ಪ್ರಯತ್ನಶಿಕ್ಷಕರು ಮಾಡಬೇಕು. ವಿವಿಧ ಚಟುವಟಿಕೆ ಆಧಾರಿತ ಕಲಿಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ವೆಂಕಟೇಶ್, ಸದಸ್ಯ ಎ.ಉಮೇಶ್, ಎಸ್ಡಿಎಂಸಿ ಅಧ್ಯಕ್ಷ ಲೋಕೇಶ್, ಅಕ್ಷರ ಫೌಂಡೇಷನ್ ಅಧ್ಯಕ್ಷ ಮಧುಸೂದನ್, ಪಿಡಿಒ ಹಸ್ಸಿರಬಾನು, ಮುಖ್ಯಶಿಕ್ಷಕ ತಿಮ್ಮಣ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜಾಚಾರ್ ಇದ್ದರು.