ಕನಕಗಿರಿ: ಬೇಸಿಗೆ ಆರಂಭವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಕುಡಿವ ನೀರಿನ ಅಭಾವವಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ತಾಲೂಕಿನ ಹಿರೇಖೇಡ, ಕರಡೋಣಿ ಹಾಗೂ ನವಲಿ ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಬಿಎಂ, ಎನ್ಆರ್ಎಲ್ಎಂ ಹಾಗೂ ನರೇಗಾ ಕಾಮಗಾರಿ ವೀಕ್ಷಿಸಿ ಶನಿವಾರ ಮಾತನಾಡಿದರು. ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಕುಡಿವ ನೀರಿನ ಸಮಸ್ಯೆ ಉಂಟಾಗಬಹುದು. ಅದಕ್ಕಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದರು.

ನವಲಿ ರಸ್ತೆಯಲ್ಲಿರುವ ಎಸ್ಎಂಸಿ ಕಾಮಗಾರಿ ವೀಕ್ಷಿಸಿ, ಹೊಸ ಕೆರೆಗಳ ನಿರ್ಮಾಣಕ್ಕೆ ಕ್ರಮವಹಿಸಲು ಸಾಮಾಜಿಕ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು. ಕರಡೋಣಿಯ ಅಮೃತ ಸರೋವರ ಕೆರೆ ವೀಕ್ಷಿಸಿದ ಸಿಇಒ ಮೆಚ್ಚುಗೆ ವ್ಯಕ್ತಪಡಿಸಿದರು.
ಚೆಕ್ ಪೋಸ್ಟ್ ವೀಕ್ಷಣೆ: ನವಲಿಯ ಚೆಕ್ಪೋಸ್ಟ್ಗೆ ಭೇಟಿ ನೀಡಿದ ಜಿಪಂ ಸಿಇಒ, ಮೂಲ ಸೌಕರ್ಯ ಹಾಗೂ ತಪಾಸಣೆ ಮಾದರಿ ಪರಿಶೀಲನೆ ಮಾಡಿದರು. ವಾಹನಗಳ ತಪಾಸಣೆ ವೇಳೆ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕೆಂದು ಸಿಬ್ಬಂದಿಗೆ ಸೂಚಿಸಿದರು. ತಾಪಂ ಇಒ ಚಂದ್ರಶೇಖರ ಕಂದಕೂರ, ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ, ಆರ್ಡಬ್ಲುೃಎಸ್ ಎಇಇ ಸತೀಶ್ ಇತರರಿದ್ದರು.