ಗುವಾಹಟಿ: ಇಲ್ಲೊಬ್ಬ ಪುರುಷ ತನ್ನ ಪತ್ನಿ ಭಾರತೀಯ ಸಂಸ್ಕೃತಿಯ ಪರಿಪಾಲನೆ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಗೆ ವಿಚ್ಛೇದನ ನೀಡಿದ್ದಾನೆ.
ಪತ್ನಿ ಮದುವೆಯಾದ ಬಳಿಕ ಶಾಖಾ ಬಳೆ ಮತ್ತು ಸಿಂಧೂರ ಇಡುತ್ತಿಲ್ಲ. ಬಂಗಾಳಿ ಸಂಸ್ಕೃತಿಯಲ್ಲಿ ಮದುವೆಯಾದ ಯುವತಿಯರು ಇವೆರಡನ್ನೂ ಧರಿಸಬೇಕು. ಇಲ್ಲದಿದ್ದರೆ, ಮದುವೆಯಾಗಿಲ್ಲ ಎಂದೇ ಭಾಸವಾಗುತ್ತದೆ. ಸಂಸ್ಕೃತಿ, ಸಂಪ್ರದಾಯವನ್ನು ಪಾಲಿಸದ ಪತ್ನಿಯಿಂದ ನನಗೆ ವಿಚ್ಛೇದನ ಬೇಕು ಎಂದು ಆತ ಮೊದಲು ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದ. ಆದರೆ ಆ ನ್ಯಾಯಾಲಯ ಇಲ್ಲಿ ದೌರ್ಜನ್ಯ ಏನೂ ನಡೆಯಲಿಲ್ಲ. ಪತ್ನಿಯಿಂದ ಯಾವುದೇ ಹಿಂಸೆ ಪತಿಗೆ ಆಗಲಿಲ್ಲ. ಹಾಗಾಗಿ ಡಿವೋರ್ಸ್ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
ಆದರೆ ಸಿಂಧೂರ ಇಡಲು ಒಪ್ಪದ ಪತ್ನಿ ಬೇಡವೇ ಬೇಡ ಎಂದು ತೀರ್ಮಾನಿಸಿದ ಪುರುಷ, ಗುವಾಹಟಿ ಹೈಕೋರ್ಟ್ಗೆ ವಿಚ್ಛೇದನ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಹೈಕೋರ್ಟ್ ಪತಿಯ ಮನವಿಯನ್ನು ಮಾನ್ಯ ಮಾಡಿದ್ದು, ವಿಚ್ಛೇದನ ನೀಡಿದೆ.
ಮುಖ್ಯ ನ್ಯಾಯಾಧೀಶರಾದ ಅಜಯ್ ಲಂಬಾ ಮತ್ತು ನ್ಯಾಯಾಧೀಶೆ ಸೌಮಿತ್ರಾ ಸೈಕಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಮುಂಬೈನ ಎರಡು ತಾಜ್ ಹೋಟೆಲ್ಗಳ ಮೇಲೆ ದಾಳಿ ನಡೆಸುವುದಾಗಿ ಉಗ್ರರ ಬೆದರಿಕೆ; ಸ್ಥಳದಲ್ಲಿ ಕಟ್ಟೆಚ್ಚರ
ಆ ಯುವತಿ ಆಕೆ ಸಿಂಧೂರ ಇಡಲೊಲ್ಲಳು. ಶಾಖಾ ಬಳೆ ಧರಿಸೋದಿಲ್ಲ ಎಂದು ಹಠ ಹಿಡಿದಿದ್ದಾಳೆ. ಇದರಿಂದ ಅವಳಿಗೆ ಇನ್ನೂ ಮದುವೆ ಆಗಿಲ್ಲ ಎಂದೇ ಭಾಸವಾಗುತ್ತದೆ ಅಥವಾ ಆಕೆ ಪತಿಯನ್ನು ಒಪ್ಪಿಕೊಂಡಿಲ್ಲ ಎಂದು ಅರ್ಥವಾಗುತ್ತದೆ. ತನಗೆ ಪತಿಯೊಂದಿಗೆ ಬಾಳಲು, ವೈವಾಹಿಕ ಜೀವನ ನಡೆಸಲು ಇಷ್ಟವಿಲ್ಲ ಎಂಬುದನ್ನು ಈ ಮೂಲಕ ಹೊರಹಾಕುತ್ತಿದ್ದಾಳೆ. ಹಾಗಾಗಿ ವಿಚ್ಛೇದನ ನೀಡುವುದು ಸರಿಯಾದ ಮಾರ್ಗ ಎಂದು ಹೈಕೋರ್ಟ್ ಹೇಳಿದೆ.
ಇವರಿಬ್ಬರಿಗೂ 2012ರ ಫೆ.17ರಂದು ವಿವಾಹ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಜಗಳ ಶುರುವಾಗಿತ್ತು. ನನಗೆ ನಿಮ್ಮ ಕುಟುಂಬದವರೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಸದಾ ಪತಿಯೊಂದಿಗೆ ಆ ಮಹಿಳೆ ಜಗಳ ಆಡುತ್ತಿದ್ದಳು. ನಂತರ 2013ರ ಜೂ.30ರಿಂದ ಅವರಿಬ್ಬರೂ ಪ್ರತ್ಯೇಕವಾಗಿ ಇರಲು ಪ್ರಾರಂಭಿಸಿದ್ದರು. ಆಕೆ ಈ ಹಿಂದೆ ಒಮ್ಮೆ ಪತಿ ಮತ್ತು ಆತನ ಕುಟುಂಬದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ತನಗೆ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದಳು. (ಏಜೆನ್ಸೀಸ್)