ಬೀಜಿಂಗ್: ಚೀನಾ ಇತ್ತ ಭಾರತದ ಗಡಿಯ ಮೇಲೆ ಕಣ್ಣು ಹಾಕಿ ಸಮರ ಸಾರುತ್ತಿರುವ ಬೆನ್ನಲ್ಲೇ ಅತ್ತ ಭೂತಾನ್ ಗಡಿಗಾಗಿಯೂ ಘರ್ಷಣೆಗೆ ಇಳಿದಿದೆ.
ಭೂತಾನ್ನ ಸ್ಯಾಕ್ಟೆಂಗ್ ವನ್ಯಜೀವಿ ಅಭಯಾರಣ್ಯ ತನಗೆ ಸೇರಿದ್ದು ಎಂದು ಇದೀಗ ಚೀನಾ ಕ್ಯಾತೆ ತೆಗೆದಿದೆ. ಜಾಗತಿಕ ಪರಿಸರ ಸೌಲಭ್ಯ ಮಂಡಳಿಯ 58ನೇ ಸಭೆಯಲ್ಲಿ ಈ ಘೋಷಣೆ ಮಾಡಿದೆ ಚೀನಾ. ಇಲ್ಲಿಯವರೆಗೆ ತಾನು ಈ ಅಭಯಾರಣ್ಯಕ್ಕೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಭೂತಾನ್, ಅಭಯಾರಣ್ಯದ ಭೂಮಿ ಯಾವಾಗಲೂ ತಮ್ಮದೇ ಆಗಿತ್ತು ಮತ್ತು ಇನ್ನು ಮುಂದೆಯೂ ತಮ್ಮದೇ ಆಗಿರುತ್ತದೆ ಎಂದು ಪ್ರತಿಪಾದಿಸಿದೆ.
ಇದನ್ನೂ ಓದಿ: ಚೀನಾದ 59 ಆ್ಯಪ್ಗಳಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ; ಇನ್ಮುಂದೆ ಟಿಕ್ಟಾಕ್ ಬಳಸುವಂತಿಲ್ಲ…
ವಾಸ್ತವವಾಗಿ ಭೂತಾನ್ ಮತ್ತು ಚೀನಾ ನಡುವೆ ಯಾವುದೇ ಗಡಿರೇಖೆ ಇಲ್ಲ, ಹಾಗೆಂದು ಚೀನಾ ಇದರ ಲಾಭ ಪಡೆಯಲು ನಾವು ಕೊಡುವುದಿಲ್ಲ. ಈ ಅಭಯಾರಣ್ಯವು ಭೂತಾನ್ನ ಅವಿಭಾಜ್ಯ ಭಾಗ್ಯ ಎಂದು ಭೂತಾನ್ ಸರ್ಕಾರ ಹೇಳಿದೆ.
ಜಾಗತಿಕ ಪರಿಸರ ಸೌಲಭ್ಯ ಮಂಡಳಿಯಲ್ಲಿ ಚೀನಾದ ಪ್ರತಿನಿಧಿಗಳು ಇದ್ದಾರೆ, ಆದರೆ ಭೂತಾನ್ಗೆ ನೇರ ಪ್ರತಿನಿಧಿ ಇಲ್ಲ. ಆದರೆ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾದ ವಿಶ್ವಬ್ಯಾಂಕ್ ಉಸ್ತುವಾರಿಯಾಗಿರುವ ಭಾರತೀಯ ಐಎಎಸ್ ಅಧಿಕಾರಿ ಅಪರ್ಣ ಸುಬ್ರಮಣಿ ಮೂಲಕ ಭೂತಾನ್ ಪ್ರತಿನಿಧಿಸುತ್ತದೆ.
58ನೇ ಸಭೆಯಲ್ಲಿ ಈ ವಿಷಯವನ್ನು ಚೀನಾದ ಪ್ರತಿನಿಧಿ ಝಾಂಗ್ಜಿಂಗ್ ವಾಂಗ್ ಪ್ರಸ್ತಾಪಿಸಿದಾಗ ಅದಕ್ಕೆ ಅಪರ್ಣ ಸುಬ್ರಮಣಿ ಅವರು ವಿರೋಧ ವ್ಯಕ್ತಪಡಿಸಿದರು. ಭೂತಾನ್ನ ಸ್ಪಷ್ಟ ನಿಲುವು ಇಲ್ಲದೇ ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳಲಾಗದು ಎಂದಿದ್ದಾರೆ. (ಏಜೆನ್ಸೀಸ್)