More

    ಮಗು ಜನಿಸುವ ಮುನ್ನವೇ ಅದನ್ನು ದತ್ತು ನೀಡುವ ಕುರಿತು ಒಪ್ಪಂದ! ಹೈಕೋರ್ಟಿಗೇ ಆಘಾತ

    ಬೆಂಗಳೂರು: ಮಗು ಜನ್ಮ ತಾಳುವ ಮುನ್ನವೇ ಅದನ್ನು ದತ್ತು ನೀಡುವ ಕುರಿತು ಮಾಡಿಕೊಳ್ಳಲಾಗಿದ್ದ ಒಪ್ಪಂದದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಗರ್ಭದಲ್ಲಿರುವ ಮಗುವಿಗೂ ಗೌರವಯುತ ಜೀವನ ನಡೆಸುವ ಹಕ್ಕಿದ್ದು, ಇಂತಹ ಒಪ್ಪಂದಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ.

    ಹೆಣ್ಣು ಮಗುವೊಂದರ ಪೋಷಣೆಯ ಹಕ್ಕು ನೀಡಲು ಕೋರಿ ದತ್ತು ಪಡೆದ ಪೋಷಕರು (ಇಸ್ಲಾಂ ಧರ್ಮೀಯರು) ಹಾಗೂ ಅದನ್ನು ಬೆಂಬಲಿಸಿ ಮಗುವಿನ ತಂದೆ-ತಾಯಿ (ಹಿಂದು ಧರ್ಮೀಯರು) ಸಲ್ಲಿಸಿದ್ದ ಅರ್ಜಿಯನ್ನು ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ, ವಿಚಾರಣಾ ನ್ಯಾಯಾಲಯದ ಆದೇಶ ನ್ಯಾಯಯುತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿ, ಮೇಲ್ಮನವಿ ವಜಾಗೊಳಿಸಿದೆ.

    ಪ್ರಕರಣವೇನು?
    ಹಿಂದು ಧರ್ಮಕ್ಕೆ ಸೇರಿದ ಉಡುಪಿಯ ದಂಪತಿ ಬಡತನದಿಂದ ಮಗುವನ್ನು ಪೋಷಣೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಕ್ಕಳಿಲ್ಲದ ಇಸ್ಲಾಂ ಧರ್ಮದ ದಂಪತಿಗೆ ಮಗುವನ್ನು ದತ್ತು ನೀಡಲು ನಿರ್ಧರಿಸಿದ್ದರು. ಮಗು ಜನಿಸುವುದಕ್ಕೂ ಮೊದಲೇ 2020ರ ಮಾ. 21ರಂದು ದತ್ತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮಾ.26ರಂದು ಹೆಣ್ಣು ಮಗು ಜನಿಸಿತ್ತು. ದತ್ತು ಪಡೆದ ಮುಸ್ಲಿಂ ದಂಪತಿ ಅಂದಾಜು ಮಗುವಿನ ಆರೈಕೆ ಮಾಡುತ್ತಿದ್ದರು.

    ಈ ಮಧ್ಯೆ, ಮಗುವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಮಕ್ಕಳ ಸಂರಕ್ಷಣೆ ಘಟಕದ ಕಾನೂನು ಅಧಿಕಾರಿ ದೂರು ಸಲ್ಲಿಸಿದ್ದರು. ಬಳಿಕ ಮಗುವನ್ನು ವಶಕ್ಕೆ ಪಡೆದು ಮಕ್ಕಳ ಆರೈಕೆ ಘಟಕಕ್ಕೆ ನೀಡಲಾಗಿತ್ತು. ಈ ನಡುವೆ, ಮಗುವಿನ ಪೋಷಣೆಯ ಹಕ್ಕು ನೀಡುವಂತೆ ದತ್ತು ಪಡೆದ ದಂಪತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿ, ಮಗುವಿನ ತಂದೆ-ತಾಯಿ ಸಹ ಮೆಮೋ ಸಲ್ಲಿಸಿದ್ದರು. ಈ ಅರ್ಜಿಯನ್ನು 2022ರ ಮೇ 31ರಂದು ವಿಚಾರಣಾ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

    ಗರ್ಭದಲ್ಲಿರುವ ಮಗುವಿಗೂ ಹಕ್ಕಿದೆ:
    ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಗರ್ಭಾವಸ್ಥೆಯಲ್ಲಿದ್ದಾಗಲೇ ಮಗುವನ್ನು ದತ್ತು ಪಡೆಯಲು ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಮಗುವಿನ ದತ್ತು ಪ್ರಕ್ರಿಯೆ ನೋಡಿಕೊಳ್ಳುವುದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜವಾಬ್ದಾರಿಯಾಗಿರುತ್ತದೆ. ಹುಟ್ಟದ ಮಗುವಿಗೂ ಜೀವ ಇರುತ್ತದೆ, ಅದರದೇ ಆದ ಹಕ್ಕುಗಳಿರುತ್ತವೆ. ಇನ್ನೂ ಜನಿಸದ ಮಗುವನ್ನು ಸ್ವಾಭಾವಿಕ ವ್ಯಕ್ತಿ ಎಂದು ಪರಿಗಣಿಸಲಾಗದಿದ್ದರೂ, ಭ್ರೂಣಕ್ಕೆ ಹೃದಯ ಬಡಿತ ಬಂದೊಡನೆಯೇ ಅದೂ ಒಂದು ಜೀವ ಎನಿಸುತ್ತದೆ. ಆ ಮಗುವಿಗೂ ಗೌರವಯುತ ಜೀವನದ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ.

    ಬಡತನದ ಕಾರಣ ಒಪ್ಪದ ಕೋರ್ಟ್:
    ಮಗುವಿನ ಹೆತ್ತ ತಂದೆ-ತಾಯಿ ಹಿಂದು ಧರ್ಮಕ್ಕೆ ಸೇರಿದ್ದಾರೆ. ಅದನ್ನು ದತ್ತು ಪಡೆದಿರುವವರು ಇಸ್ಲಾಂ ಧರ್ಮೀಯರಾಗಿದ್ದಾರೆ. ಆದರೆ, ಮಹಮದೀಯ ಕಾನೂನಿನಲ್ಲಿ ದತ್ತು ಸ್ವೀಕಾರಕ್ಕೆ ಮಾನ್ಯತೆ ಇಲ್ಲ. ಮಗು ಸಾಕಲಾಗದಿದ್ದರೆ ಪಾಲಕರು ಅದನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಬಹುದಿತ್ತು. ಅದು ಸಾಧ್ಯವಾಗದಿದ್ದರೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸುವ ಮೂಲಕ ಮಗುವನ್ನು ನೋಡಿಕೊಳ್ಳಬಹುದಿತ್ತು. ಬಡತನದ ಕಾರಣಕ್ಕೆ ಮಗುವನ್ನು ದತ್ತು ನೀಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು. ಬಡತನ ನಿರ್ಮೂಲನೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಲಾಭ ಪಡೆದು ಮಗುವನ್ನು ಬೆಳೆಸಬಹುದಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಹಾಗೂ ಆತ್ಮಗೌರವವಿದ್ದರೆ ಬ್ಯಾಂಕ್‌ನಿಂದ ಸಾಲ ಪಡೆದು ಜೀವನ ನಡೆಸಬಹುದಿತ್ತು. ಅದನ್ನು ಬಿಟ್ಟು ದತ್ತು ಹೆಸರಿನಲ್ಲಿ ಹೆತ್ತವರೇ ಮಗುವನ್ನು ಮಾರಾಟ ಮಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ತೀಕ್ಷ್ಣವಾಗಿ ಹೇಳಿರುವ ಹೈಕೋರ್ಟ್,

    ಮಗು ಮಾರಾಟವಾಗಬಾರದು:
    ಪ್ರಕರಣದ ವಿಚಾರಣೆಗೆ ಹಾಜರಿದ್ದ ಮಗುವಿನ ತಂದೆ-ತಾಯಿ, ತಾವೇ ಮಗುವನ್ನು ನೋಡಿಕೊಳ್ಳುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಿದ್ದಲ್ಲಿ, ಅವರು ಮಕ್ಕಳ ಕಲ್ಯಾಣ ಸಮಿತಿಗೆ ಮನವಿ ಸಲ್ಲಿಸಬೇಕು. ಆ ಮನವಿಯನ್ನು ಮಕ್ಕಳ ಕಲ್ಯಾಣ ಸಮಿತಿ ಕಾನೂನಿನ ಪ್ರಕಾರ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸಮಿತಿಯು ಮಗುವನ್ನು ಅದರ ಪಾಲಕರಿಗೆ ಹಸ್ತಾಂತರಿಸುವ ತೀರ್ಮಾನಕ್ಕೆ ಬಂದರೆ, ಮಗುವನ್ನು ಬೇರೆ ಯಾರಿಗೂ ಮಾರಾಟ ಮಾಡದಂತೆ ನೋಡಿಕೊಳ್ಳಲು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸರು ಪಾಲಕರ ಚಟುವಟಿಕೆ ಮೇಲೆ ನಿಗಾವಹಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts