ವಿಜಯಪುರ: ಬಿಸಿಲೂರು ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದು ಒಂದೆಡೆ ಅನುಕೂಲವಾದರೆ ಇನ್ನೊಂದೆಡೆ ಪ್ರತಿಕೂಲ ವಾತಾವರಣ ನಿರ್ಮಿಸಿತು !
ಕಳೆದೆರಡು ದಿನಗಳಿಂದ ಆಗಸದಲ್ಲಿ ಕಾಣಿಸಿಕೊಂಡಿದ್ದ ಕಾರ್ಮೋಡಗಳು ಏಕಾಏಕಿ ಧರೆಗಿಳಿದಿದ್ದರಿಂದ ಹಳ್ಳ-ಹರಿಗಳಲ್ಲಿ ನೀರು ಜಿನುಗಿತು. ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಏಕಾಏಕಿ ಸುರಿದ ಧಾರಾಕಾರ ಮಳೆ ಕೃಷಿಕರಿಗೆ ಸಮಾಧಾನ ತಂದರೆ ತೋಟಗಾರಿಕೆ ಬೆಳೆಗಾರರಿಗೆ ಸಂಕಟದಾಯಕವಾಗಿ ಪರಿಣಮಿಸಿತು.
ತೊಗರಿ, ಕಡಲೆ ಮತ್ತಿತರ ಕೃಷಿ ಬೆಳೆಗೆ ಮಳೆ ವರವಾದರೆ ದ್ರಾಕ್ಷಿ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡಿತು. ದ್ರಾಕ್ಷಿ ಬೆಳೆ ಸಣ್ಣದಾಗಿ ಕಾಯಿ ಕಟ್ಟುತ್ತಿದ್ದು ಈ ಸಂದರ್ಭದಲ್ಲಿ ಮಳೆ ಸುರಿದಿದ್ದು ಹಾನಿಯುಂಟು ಮಾಡಿದ್ದಲ್ಲದೇ ರೋಗಗಳಿಗೆ ಆಹ್ವಾನ ನೀಡಿದಂತಾಯಿತು.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಳೆಯಿಂದ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತು. ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ತಿಕೋಟಾ ತಾಲೂಕಿನ ಹುಬನೂರ ಎಲ್ಟಿ ನಂ. 3 ರಲ್ಲಿ ಆಕ್ಕುಬಾಯಿ ರಾಜು ರಾಠೋಡ ಎಂಬುವರ ಮನೆ ಧರಾಶಾಹಿಯಾಯಿತು. ಮಣ್ಣಿನ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು ಬದುಕು ಬೀದಿಗೆ ಬಂದಂತಾಗಿದೆ.