ಕಾಸರಗೊಡು: ಶಬರಿಮಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಯಾತ್ರಾರ್ಥಿಗಳಿಗೆ ಪಂಪಾ ನದಿಯಲ್ಲಿ ತೀರ್ಥಸ್ನಾನವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಡಾ.ದಿವ್ಯಾ ಅಯ್ಯರ್ ಸುರಕ್ಷತೆ ದೃಷ್ಟಿಯಿಂದ ಈ ಆದೇಶ ಹೊರಡಿಸಿದ್ದಾರೆ.
ಪಂಪಾದಲ್ಲಿ ಯಾತ್ರಿಕರು ಸ್ನಾನ ಮಾಡದಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು, ಪ್ರವಾಸಿಗರು ನದಿಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ನಡುವೆ, ಓಣಂ ದಿನದ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನವನ್ನು ಮಂಗಳವಾರ ಸಂಜೆ 5 ಗಂಟೆಗೆ ತೆರೆಯಲಾಗುವುದು. ದೇವಾಲಯ ತೆರೆದಿರುವ ದಿನಗಳಲ್ಲಿ ಉದಯಾಸ್ತಮಯ ಪೂಜೆ, ಅಷ್ಟಾಭಿಷೇಕ, ಕಲಶಾಭಿಷೇಕ, ಕಳಭಾಭಿಷೇಕ, ಪಡಿಪೂಜೆ, ಪುಷ್ಪಾಭಿಷೇಕ ನಡೆಯಲಿದೆ.
ಭಕ್ತರು ದರ್ಶನಕ್ಕೆ ವರ್ಚುವಲ್ ಸಾಲಿನ ವ್ಯವಸ್ಥೆ ಬಳಸಬೇಕು. ನಿಲಕ್ಕಲ್ನಲ್ಲಿ ಭಕ್ತರಿಗಾಗಿ ಸ್ಥಳದಲ್ಲೇ ಬುಕಿಂಗ್ ಕೌಂಟರುಗಳನ್ನು ಆರಂಭಿಸಲಾಗಿದೆ. ಉತ್ರಾಡಂನಿಂದ ನಾಲ್ಕು ದಿನಗಳವರೆಗೆ ಓಣ ಭೋಜನವೂ ಸಿಗಲಿದೆ. ಸೆ.10ರಂದು ರಾತ್ರಿ 10 ಗಂಟೆಗೆ ಹರಿವರಾಸನಂ ಹಾಡುವ ಮೂಲಕ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ.