More

    ಶರ್ಮೀಣ್ಯಾವತಿಯಲ್ಲಿ ಮಿಂದೆದ್ದ ಭಕ್ತರು

    ರಿಪ್ಪನ್‌ಪೇಟೆ: ಕೋಡೂರು ಗ್ರಾಪಂ ವ್ಯಾಪ್ತಿಯ ಹಿಂಡ್ಲೆಮನೆಯ ಶ್ರೀಕ್ಷೇತ್ರ ರಾಮತೀರ್ಥದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ 10ನೇ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

    ಶರ್ಮೀಣ್ಯಾವತಿ ನದಿಯಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು. ಸುತ್ತಮುತ್ತಲ ಗ್ರಾಮಗಳಾದ ಹುಗುಡಿ, ಮಳಲಿಕೊಪ್ಪ, ಗರ್ತಿಕೆರೆ, ಕೋಡೂರು, ಕರಿಗೆರಸು, ಕುನ್ನೂರು, ನೆಣೆಬಸ್ತಿ, ಕಲ್ಲುಕೊಪ್ಪ, ನಂದಿಗ, ಜಂಬಳ್ಳಿ, ಹೊಳೆಕೇವಿಗಳಿಂದ ತಂಡೋಪತಂಡವಾಗಿ ಬಂದ ಭಕ್ತರು ನದಿಯಲ್ಲಿ ಮಿಂದೆದ್ದು, ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
    ಮುಂಜಾನೆಯಿಂದ ಭಕ್ತರು ತೀರ್ಥಸ್ನಾನದಲ್ಲಿ ಪಾಲ್ಗೊಂಡರು. ಕೆಂಜಿಗಾಪುರದ ಶ್ರೀಧರ ಭಟ್ ಅವರ ಸಾಂಗತ್ಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ಮತ್ತು ಕಲಾತತ್ವ ಹೋಮ ನೆರವೇರಿಸಲಾಯಿತು. ಹಾಲಂದೂರು ಶ್ರೀಧರ್ ಭಟ್, ದೇವಸ್ಥಾನದ ಅರ್ಚಕ ಎ.ವಿ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿನಿಯೋಗ ನೆರವೇರಿತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಹೊಳೆ ದೀಪೋತ್ಸವ ಹಾಗೂ ವಿಶೇಷ ಪೂಜೆಗಳು ನೆರವೇರಿದವು.
    ಗ್ರಾಪಂ ಸದಸ್ಯರಾದ ಶೇಖರಪ್ಪ, ಚಂದ್ರಕಲಾ ಶ್ರೀಧರ್, ಅನ್ನಪೂರ್ಣಾ ಮಹೇಶ, ಪಿಡಿಒ ನಾಗರಾಜ್ ಇತರರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts