ಗುವಾಹಟಿ: ಈಗಷ್ಟೇ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿದ್ದ ಪೂರ್ವೋತ್ತರ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನೈಋತ್ಯ ಮಾನ್ಸೂನ್ ಮಾರುತಗಳು ಅಸ್ಸಾಂ ಹಾಗೂ ಮೇಘಾಲಯದಲ್ಲಿ ಭಾರೀ ಮಳೆಯಾಗಿದೆ.
ಶುಕ್ರವಾರ ಸುರಿದ ಭಾರೀ ಮಳೆಗೆ ತತ್ತರಿಸಿರುವ ಈ ರಾಜ್ಯಗಳು ನೀರಿನಿಂದ ಸಂಪೂರ್ಣ ಜಲಾವೃತಗೊಂಡಿವೆ. ಅಸ್ಸಾಂ ರಾಜಧಾನಿ ಗುವಾಹಟಿ ಹಾಗೂ ಮೇಘಾಲಯದ ಗಡಿಯಾದ್ಯಂತ ಇರುವ ಗ್ರಾಮಗಳು ನೀರಿನಿಂದ ಮುಳುಗಿವೆ.
ರಸ್ತೆಯಲ್ಲಿ ನಿಂತಿರುವ ಕಾರುಗಳೇ ಮುಳುಗಡೆಯಾಗಿದ್ದು, ನಾಳೆಯೂ ಭಾರೀ ಮಳೆಯಾಗಲಿದ್ದು, ಜೂನ್ 7 ರವರೆಗೆ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಒಡಿಶಾ ಉತ್ತರ ಕರಾವಳಿ, ಪಶ್ಚಿಮ ಬಂಗಾಳದಲ್ಲೂ ಭಾರೀ ಮಳೆ ಜತೆಗೆ ಚಂಡಮಾರುತದ ಭೀತಿ ಎದುರಾಗಿದೆ. ಮುಂದಿನ ಐದು ದಿನಗಳಲ್ಲಿ ಸಿಕ್ಕಿಂನಲ್ಲೂ ಭಾರೀ ಮಳೆಯಾಗಲಿದೆ.
ಅಸ್ಸಾಂನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರವಾಹ ಪರಿಸ್ಥಿತಿಯಲ್ಲಿ 14 ಮಂದಿ ಮೃತಪಟ್ಟಿದ್ದರು. 3 ಸಾವಿರ ಹಳ್ಳಿಯಲ್ಲಿ ಸಿಲುಕಿದ್ದ 8 ಲಕ್ಷ ಮಂದಿಯನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. (ಏಜೆನ್ಸೀಸ್)