ಕಾರವಾರ: ಜಿಲ್ಲೆಯಲ್ಲಿ ಹದವಾಗಿ ಮಳೆ ಸುರಿಯುತ್ತಿದೆ. ಆ.13ರವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬುಧವಾರದ ವರದಿಯಂತೆ ಅಂಕೋಲಾ-19.4, ಭಟ್ಕಳ-26.5, ಹಳಿಯಾಳ-15.9, ಹೊನ್ನಾವರ-29.7, ಕಾರವಾರ-20.9, ಕುಮಟಾ-38.2, ಮುಂಡಗೋಡ-20, ಸಿದ್ದಾಪುರ-68.5, ಶಿರಸಿ-48.4, ಜೊಯಿಡಾ-44.7, ಯಲ್ಲಾಪುರ-30.8,ದಾಂಡೇಲಿ-24.4 ಮಿಮೀ ಮಳೆಯಾಗಿದೆ. 31 ಮನೆಗಳಿಗೆ ಅಲ್ಪ ಹಾಗೂ 9 ಮನೆಗಳಿಗೆ ಭಾಗಶಃ ಹಾಗೂ ಶಿರಸಿಯಲ್ಲಿ 3 ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ.
ಸೂಚನೆ
ಕದ್ರಾ ಜಲಾಶಯದಿಂದ ಗೇಟ್ಗಳನ್ನು ಹೊರತೆಗೆದು ಮತ್ತೊಮ್ಮೆ ನೀರು ಬಿಡುವುದಾಗಿ ಕರ್ನಾಟಕ ವಿದ್ಯುತ್ ನಿಗಮವು ಎಚ್ಚರಿಕೆ ನೀಡಿದೆ. ಗರಿಷ್ಠ 34.50 ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯವಿದ್ದರೂ ಪ್ರವಾಹ ನಿಯಂತ್ರಣ ದೃಷ್ಟಿಯಿಂದ ಗರಿಷ್ಠ ಮಟ್ಟವನ್ನು 31 ಮೀಟರ್ಗೆ ಸೀಮಿತ ಮಾಡಲಾಗಿದೆ.
ಬುಧವಾರ ಬೆಳಗಿನ ವರದಿಯಂತೆ ಕದ್ರಾ ಜಲಾಶಯದಲ್ಲಿ 30.65 ಮೀಟರ್ ನೀರು ಭರ್ತಿಯಾಗಿದೆ. 22,616 ಒಳಹರಿವಿದೆ. 19596 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆ ಮಾಡಿ ಹೊರ ಬಿಡಲಾಗುತ್ತಿದ್ದರೂ ಒಳಹರಿವು ಹೆಚ್ಚಿರುವುದರಿಂದ ಅಣೆಕಟ್ಟೆಯ ಗರಿಷ್ಠ ಮಟ್ಟ ಶೀಘ್ರ ಭರ್ತಿಯಾಗುವ ಸಾಧ್ಯತೆ ಇದೆ. ಇದರಿಂದ ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡುವ ಸಾಧ್ಯತೆ ಇದೆ. ಅಣೆಕಟ್ಟೆಯ ಕೆಳಭಾಗದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.