ಭೋಪಾಲ್: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ಜನರಲ್ಲಿ ಲ್ಯಾನ್ಸ್ ಶ್ರೇಣಿಯ ಸೇನಾಧಿಕಾರಿ ನಾಯಕ್ ಜಿತೇಂದ್ರ ಕುಮಾರ್ ವರ್ಮ ಕೂಡ ಒಬ್ಬರು. ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಧಮಂದ ಗ್ರಾಮದ ಮೂಲದ ಇವರು ಕಳೆದ ದೀಪಾವಳಿ ಹಬ್ಬಕ್ಕೆ ತಮ್ಮ ಮನೆಗೆ ವಾಪಸಾಗಿದ್ದರು. ಆಗ ಕುಟುಂಬದೊಡನೆ ಕಳೆದ ಆನಂದದ ಕ್ಷಣಗಳೇ ಈಗ ಅವರ ನೆನಪಾಗಿ ಉಳಿಯಲಿದೆ.
ತಮ್ಮ ಪುತ್ರನ ಕೊನೆಯ ಭೇಟಿಯ ಬಗ್ಗೆ ಹೇಳುತ್ತಾ, “ಆಗ ಮುಂದಿನ ರಜೆಯಲ್ಲಿ ಬಂದಾಗ ನನ್ನನ್ನು ವೈಷ್ಣೋದೇವಿ ಯಾತ್ರೆ ಕರ್ಕೊಂಡುಹೋಗ್ತೀನಿ ಅಂದಿದ್ದ” ಎಂದು ವರ್ಮಾರ ತಂದೆ ಶಿವರಾಜ್ ನೆನಪಿಸಿಕೊಂಡಿದ್ದಾರೆ.
2011ರಲ್ಲಿ ಸೇನೆ ಸೇರಿದ್ದ ಜಿತೇಂದ್ರ ಕುಮಾರ್ ವರ್ಮ 3 ಪಾರಾ (ಎಸ್ಎಫ್) ರೆಜಿಮೆಂಟ್ನಲ್ಲಿದ್ದ ಎಕ್ಸ್ಪರ್ಟ್ ಸ್ನೈಪರ್ ಆಗಿದ್ದರು. ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ರ ಖಾಸಗಿ ಭದ್ರತಾ ಅಧಿಕಾರಿಗಳಲ್ಲಿ ಒಬ್ಬರಾಗಿ ನಿಯೋಜನೆಯಲ್ಲಿದ್ದರು. ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಜಿತೇಂದ್ರ ಕುಮಾರ್ ತಮ್ಮ ವೃದ್ಧ ತಂದೆಯ ಜೊತೆಗೆ, ಪತ್ನಿ, 4 ವರ್ಷದ ಪುತ್ರಿ ಮತ್ತು 1 ವರ್ಷದ ಪುತ್ರನನ್ನು ಅಗಲಿದ್ದಾರೆ.
ಇದನ್ನೂ ಓದಿ: ಓ ವಿಧಿಯೇ ನೀನೆಷ್ಟು ಕ್ರೂರಿ… ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್ ಲಿಡ್ಡರ್ ಪತ್ನಿ
ಕುಟುಂಬಕ್ಕೆ 1 ಕೋಟಿ ರೂ.: ಇಂದು ಸೆಹೋರ್ ನಗರದಲ್ಲಿ ಜಿತೇಂದ್ರ ಕುಮಾರ್ ಅವರ ಪಾರ್ಥಿವ ಶರೀರವನ್ನು ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಅಂತಿಮ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್, “ಜಿತೇಂದ್ರ ಕುಮಾರ್ ನಮ್ಮ ರಾಜ್ಯದಲ್ಲಿ ಹುಟ್ಟಿದವರು ಎಂದು ನಮಗೆ ಹೆಮ್ಮೆ ಇದೆ. ಅವರು ವೀರ ಸೈನಿಕರಾಗಿದ್ದರು. ಅವರ ಕುಟುಂಬ ಈಗ ನನ್ನ ಕುಟುಂಬದಂತೆ” ಎಂದರು.
ಜಿತೇಂದ್ರ ನಾಯಕ್ರ ಕುಟುಂಬಕ್ಕೆ 1 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ ಸಿಎಂ ಚೌಹಾನ್, ಅವರ ಪುತ್ರಿ ಸುನೀತ ಬೆಳೆದ ಮೇಲೆ ಉದ್ಯೋಗ ನೀಡಲಾಗುವುದು ಎಂದರು. ದಿವಂಗತ ಸೈನಿಕನ ಗೌರವಾರ್ಥ, ಅವರ ಗ್ರಾಮದ ಶಾಲೆಯನ್ನು ಅವರ ಹೆಸರಿನಲ್ಲಿ ನಾಮಕರಣ ಮಾಡಲಾಗುವುದು ಎಂದರು. (ಏಜೆನ್ಸೀಸ್)
“ಮತಾಂತರ ಅಭಿವ್ಯಕ್ತಿ ಸ್ವಾತಂತ್ರ್ಯ… ಬಲವಂತವಾಗಿ ಕಾಯ್ದೆ ತಂದ್ರೆ ಸುಟ್ಟು ಹಾಕ್ತೀವಿ”