More

    ಜನಸಂಖ್ಯೆಯಲ್ಲಿ ಚೈನಾ ಹಿಂದಿಕ್ಕಿದ ಭಾರತ; ಹಾವೇರಿ ವಿವಿ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ

    ಹಾವೇರಿ: ಭಾರತ 142 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ವಿಶ್ವಜನಸಂಖ್ಯೆಯ ಶೇ.18ರಷ್ಟು ಜನಸಂಖ್ಯೆ ಹೊಂದುವ ಮೂಲಕ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ವಿಶ್ವಜನಸಂಖ್ಯೆಯ ಶೇ.17ರಷ್ಟು ಪಾಲು ಹೊಂದಿರುವ ಚೈನಾ ದೇಶವನ್ನು ಹಿಂದಿಕ್ಕಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸವಾಲುಗಳನ್ನು ಹುಟ್ಟಿ ಹಾಕುವ ಸಾಧ್ಯತೆ ಇದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ. ಬಾಗಲಕೋಟಿ ಕಳವಳ ವ್ಯಕ್ತಪಡಿಸಿದರು.
    ತಾಲೂಕಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವ ಜನಸಂಖ್ಯೆ ಹೆಚ್ಚಳ ಹಾಗೂ ಭಾರತದ ಸಂದರ್ಭದಲ್ಲಿ ಅರ್ಥಿಕ ವಲಯದ ವೃದ್ಧಿಯ ಸ್ಥಿತಿಗತಿ ಕುರಿತು ಮಾತನಾಡಿದರು.
    ವೈದ್ಯಕೀಯ ಸೌಲಭ್ಯಗಳ ಹೆಚ್ಚಳ ಮತ್ತು ಶಿಶು ಮರಣ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಭಾರತದ ಜನಸಂಖ್ಯಾ ವೃದ್ಧಿಯ ದರ ಕಳೆದ ಒಂದು ದಶಕದಲ್ಲಿ ಕಡಿಮೆಯಾಗುತ್ತಿದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆಯು ಪ್ರಗತಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಹುಟ್ಟಿಹಾಕುತ್ತಿದೆ ಎಂದರು.
    ವಿಶ್ವದ ಜನಸಂಖ್ಯೆಯು ಎಂಟುನೂರು ಕೋಟಿ ತಲುಪಿದ್ದು, ಭೂಮಿಯ ಧಾರಣಾ ಶಕ್ತಿಯನ್ನು ಸ್ಥಿರವಾಗಿ ಕಾಪಾಡಿಕೊಂಡು ಹೋಗಬೇಕಾದ ಸವಾಲು ಎದುರಾಗಿದೆ. 1987ರ ಜು.11ರಂದು ವಿಶ್ವದ ಜನಸಂಖ್ಯೆಯು ಐದುನೂರು ಕೋಟಿ ತಲುಪಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಪ್ರತಿವರ್ಷ ಜು.11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ಕರೆಕೊಟ್ಟಿದ್ದು, ಜಗತ್ತಿನಾದ್ಯಂತ ಜನಸಂಖ್ಯಾ ಹಚ್ಚಳದ ಪರಿಣಾಮಗಳನ್ನು ಕುರಿತು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ ಮಾತನಾಡಿ, ಭಾರತೀಯ ಸಮಾಜದಲ್ಲಿನ ಕೆಲ ಪಾರಂಪರಿಕ ನಂಬಿಕೆಗಳಿಂದಾಗಿ ಲಿಂಗ ತಾರತಮ್ಯ ಜಾರಿಯಲ್ಲಿದೆ. ಮಹಿಳೆ ಇಂದು ಎಲ್ಲ ರಂಗಗಳಿಲ್ಲಿಯೂ ಮುಂಚೂಣಿಯ ಸ್ಥಾನದಲ್ಲಿದ್ದು, ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿ ಯುವ ಸಮುದಾಯವು ಲಿಂಗ ತಾರತಮ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
    ಸಮಾರಂಭದಲ್ಲಿ ಡಾ.ಪ್ರಶಾಂತ ಎಚ್.ವೈ., ಡಾ.ಅನಿತಾ ಹಾಲಮತ, ಡಾ.ಚಿದಾನಂದ ಕಮ್ಮಾರ, ಡಾ.ವಿಶ್ವನಾಥ ಚಿಂತಾಮಣಿ, ಪ್ರೊ.ವಿ.ಎಸ್.ಕೆಲೂರ, ಮತ್ತಿತರು ಉಪಸ್ಥಿತರಿದ್ದರು.
    ಮಹಿಳಾ ಸಬಲೀಕರಣ ಜನಸಂಖ್ಯೆ ನಿಯಂತ್ರಣಕ್ಕೆ ಪೂರಕ
    ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹೆಣ್ಣುಮಕ್ಕಳ ಸಬಲೀಕರಣವು ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಯುವ ಸಮುದಾಯದ ಪ್ರಮಾಣ ಕೇವಲ ಶೇ.30ರಷ್ಟಿದ್ದು, ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಇದರಿಂದ ಪ್ರಜನನ ಪ್ರಕ್ರಿಯೆ ಮುಂದೂಡಲ್ಪಟ್ಟು ಜನಸಂಖ್ಯೆ ನಿಯಂತ್ರಣ ಸಾಧ್ಯವಾಗುವುದು ಎಂದು ಬಾಗಲಕೋಟಿ ವಿಶ್ಲೇಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts