ಹಾವೇರಿ: ಕೌರವ ಪ್ರೊಡಕ್ಷನ್ ಹೌಸ್ನಿಂದ ವತಿಯಿಂದ ಯೋಗರಾಜ್ ಭಟ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ‘ಗರಡಿ’ ಚಲನಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನ.1ರಂದು ಸಂಜೆ 6 ಗಂಟೆಗೆ ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇದರ ಜತೆಗೆ ಭರ್ಜರಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ, ನಟ ಬಿ.ಸಿ.ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರಡಿ ಚಿತ್ರದ ಟ್ರೇಲರ್ ಬಿಡುಗಡೆ ನಂತರ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯೋತ್ಸವದ ನಿಮಿತ್ತ ಕನ್ನಡಪರ ಗೀತೆಗಳು, ಕೌರವ, ಡಾಕ್ಟರ್ ರಾಜಕುಮಾರ್ ಅವರ ಚಿತ್ರಗೀತೆಗಳು ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅಪ್ಪಟ ದೇಸಿ ಕಲೆಯಾಗಿರುವ ಗರಡಿ, ಪೈಲ್ವಾನರ ಸುತ್ತ ಕಥೆ ಹೆಣೆದುಕೊಂಡಿದೆ. ಮರೆತು ಹೋಗುತ್ತಿರುವ ಕುಸ್ತಿ ಕಲೆಯನ್ನು ಯುವಜನರಿಗೆ ಪರಿಚಯಿಸುವ ಪ್ರಯತ್ನವನ್ನು ಸಿನಿಮಾ ಮೂಲಕ ಮಾಡಿದ್ದೇವೆ. ಕುಟುಂಬಸಮೇತರಾಗಿ ಕುಳಿತು ನೋಡುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಯಶಸ್ವಿಸೂರ್ಯ ನಾಯಕ ನಟರಾಗಿದ್ದು, ಸಾಹೀಲ ನಾಯಕಿಯಾಗಿದ್ದಾರೆ. ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕಿದ್ದು, ಮೂರು ಹಾಡುಗಳು ಕೇಳುಗರ ಗಮನ ಸೆಳೆಯಲಿವೆ. ನ.10ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ಕಾರ್ಯಕಾರಿ ನಿರ್ಮಾಪಕಿ ಸೃಷ್ಠಿ ಪಾಟೀಲ, ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಇತರರಿದ್ದರು.
ಕೋಟ್
ಒಂದೂವರೆ ವರ್ಷದ ಹಿಂದೆ ಮೊಳಕೆಯೊಡೆದ ಗರಡಿ ಸಿನಿಮಾ ನ.10ರಂದು ತೆರೆಗೆ ಅಪ್ಪಳಿಸಲಿದೆ. ಮಾಜಿ ಉಸ್ತಾದ್ ಪಾತ್ರದಲ್ಲಿ ಬಿ.ಸಿ.ಪಾಟೀಲರು ಮತ್ತೆ ಮೀಸೆ ತಿರುವಿದ್ದಾರೆ. ಬದಾಮಿಯಲ್ಲಿ ಶೇ.50ರಷ್ಟು ಚಿತ್ರೀಕರಣ ಮಾಡಲಾಗಿದೆ. ಈ ಭಾಗದ ಕುಸ್ತಿಪಟುಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬೇರೆ ಭಾಷೆಗಳಿಗೂ ಡಬ್ ಮಾಡಲಿದ್ದೇವೆ.
> ಯೋಗರಾಜ್ ಭಟ್, ನಿರ್ದೇಶಕ