ಬೆಟ್ಟದಪುರ: ಸರ್ಕಾರಿ ಶಾಲೆ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳುವ ಮೂಲಕ ಅಗತ್ಯ ಸಹಕಾರ ನೀಡಬೇಕು ಎಂದು ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಸಲಹೆ ನೀಡಿದರು.
ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ(ಪ್ರಾಥಮಿಕ ವಿಭಾಗ)ಯಲ್ಲಿ ಮಂಗಳವಾರ ಆಯೋಜಿಸಿದ್ದ ದಾನಿಗಳಿಂದ ಡ್ರಮ್ ಸೆಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಶಾಲೆಗಳಿಗೆ ಹೋಲಿಕೆ ಮಾಡಿದರೆ ಸರ್ಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿವೆ. ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹೆಚ್ಚಿನ ಸಹಕಾರಿಯಾಗಲಿದೆ. ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿ ಇರುವಂತಹ ಹಿರಿಯ ವಿದ್ಯಾರ್ಥಿಗಳು ಶಾಲೆಯನ್ನು ನೆನೆದು ಸಹಕಾರ ನೀಡುವುದು ನಿಜಕ್ಕೂ ಶ್ಲಾಘನೀಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿನಿ ಡಾ.ಆಶಾಮಣಿ ಶರತ್ ಕುಮಾರ್ ಅವರು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಗಳು ಪೂರ್ವಿಕಳ ಹುಟ್ಟುಹಬ್ಬದ ಪ್ರಯುಕ್ತ ಉಚಿತವಾಗಿ ಬ್ಯಾಂಡ್ ಸೆಟ್ನ್ನು ಕೊಡುಗೆಯಾಗಿ ನೀಡಿದರು. ಇದೇ ವೇಳೆ ಗ್ರಾಮದ ಮುಖಂಡರಾದ ಗೋವಿಂದೆಗೌಡ, ಅಣ್ಣಯ್ಯಚಾರ್, ಬಿಲ್ ಕಲೆಕ್ಟರ್ ನಂಜೇಗೌಡ, ಸಿಬ್ಬಂದಿ ಕಿರಣ್, ಆನಂದ್, ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ವಿದ್ಯಾಶ್ರೀ, ಶಾಜಿಯಾ ಪರ್ವಿನ್, ಚಂದ್ರಶೇಖರ, ಸಚಿನ್, ನಾಗರತ್ನ, ರುಕ್ಮಿಣಿ, ಜಬೀನ ಬೇಬಿ, ಪ್ರಿಯಾ, ಯಶೋಧ ಮತ್ತಿತರರಿದ್ದರು.