ಹಟ್ಟಿಚಿನ್ನದಗಣಿ: ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ನನಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆಯಿದೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿಯಾಗಿ ಹೈಕಮಾಂಡ್ ಇನ್ನೂ ಯಾರ ಹೆಸರನ್ನೂ ಪ್ರಕಟಿಸಿಲ್ಲ. ಆದರೆ, ಕೆಲವರು ತಮಗೆ ಬಿ.ಫಾರ್ಮ್ ಸಿಕ್ಕಂತೆ ವಿಜೃಂಭಿಸುತ್ತಿರುವುದು ಸರಿಯಲ್ಲ. ಶಾಸಕನಾದ ನನಗೆ ಟಿಕೆಟ್ ನೀಡುವದಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಇಲ್ಲವೇ ವಿಪಕ್ಷದ ನಾಯಕ ತಿಳಿಸಿಲ್ಲ. ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸುಗೂರಿನಲ್ಲಿ ದಲಿತ ಎಡಗೈ (ಮಾದಿಗ) ಸಮುದಾಯಕ್ಕೆ ನೀಡುವ ಕುರಿತು ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಇನ್ನೊಂದು ಪಟ್ಟಿ ಬಿಡುಗಡೆ ಹೊತ್ತಿಗೆ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ನನಗೆ ಟಿಕೆಟ್ ನಿರಾಕರಿಸಿದರೆ ಮತದಾರರು ಯಾವ ದಾರಿ ತೋರುತ್ತಾರೆ ಅದಕ್ಕೆ ನಾನು ಬದ್ಧವಾಗಿರುತ್ತೇನೆಂದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ತಾ.ಪಂ ಮಾಜಿ ಸದಸ್ಯ ಎಂ.ಲಿಂಗರಾಜ್, ಲಿಂಗಸುಗೂರು ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ, ಪ.ಪಂ ಸದಸ್ಯರಾದ ಜಿ.ಶ್ರೀನಿವಾಸ್, ಸಿರಾಜುದ್ದೀನ್, ಸೈಯದ್ ಇಸ್ಮಾಯಿಲ್ ಖಾದ್ರಿ ಇದ್ದರು.