ಹಾಸನ: ಅರಕಲಗೂಡು ಪಟ್ಟಣದ ಕೋಟೆ ಹಿಂದಲ ಕೊಪ್ಪಲಿನಲ್ಲಿ ಸ್ಥಳೀಯ ಅಭ್ಯರ್ಥಿಗೆ ಅಂಗನವಾಡಿ ಶಿಕ್ಷಕಿ ಹುದ್ದೆ ನೀಡಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರ ವಿರೋಧದಿಂದ ಕಳೆದ ನಾಲ್ಕು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಅಂಗನವಾಡಿ ಕೇಂದ್ರವನ್ನು ಹಿರಿಯ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ತೆರೆಸಿದ ಘಟನೆ ಬುಧವಾರ ನಡೆಯಿತು.
ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಲೋಪ ಎಸಗಿ ಸ್ಥಳೀಯ ಮಹಿಳಾ ಅಭ್ಯರ್ಥಿಗೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೇ ಈ ಕುರಿತು ನ್ಯಾಯಾಲಯದ ಮೆಟ್ಟಿಲನ್ನು ಹತ್ತಲಾಗಿತ್ತು. ಈ ಮಧ್ಯೆ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ವಿರೋಧ ವ್ಯಕ್ತಪಡಿಸಿದ್ದರು. ಬೀಗಮುದ್ರೆ ತೆರವುಗೊಳಿಸಿ ಕೇಂದ್ರದ ಪುನರಾರಂಭಕ್ಕೆ ಅಧಿಕಾರಿಗಳು ಸತತ ಪ್ರಯತ್ನ ನಡೆಸಿದ್ದರೂ ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ.
ಮಹಿಳಾ ಮತ್ತು ಮಕ್ಕಳ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಕೆ.ಜಿ. ದಿಲೀಪ್, ತಾಪಂ ಇಒ ಎನ್. ರವಿಕುಮಾರ್, ಸಿಡಿಪಿಒ ಪಿ. ಹರಿಪ್ರಸಾದ್, ಎಸಿಡಿಪಿಒ ಮಂಜುಳಾ, ಪಪಂ ಅಧ್ಯಕ್ಷ ಹೂವಣ್ಣ ಅವರ ಸಮ್ಮುಖದಲ್ಲಿ ಗ್ರಾಮಸ್ಥರ ಮನವೊಲಿಸಿ ಅಂಗನವಾಡಿ ಕೇಂದ್ರಕ್ಕೆ ಹಾಕಿದ್ದ ಬೀಗಮುದ್ರೆಯನ್ನು ತೆರವುಗೊಳಿಸಿದರು.