ಮಂಗಳೂರು: ಕೋಟಿ-ಚೆನ್ನಯರ ಜನ್ಮಸ್ಥಾನ ಪಡುಮಲೆ ಎನ್ನುವುದಕ್ಕೆ ಆಧಾರಗಳಿವೆ. ತಿರುಚುವುದು ಹಿತವಲ್ಲ, ಗೆಜ್ಜೆಗಿರಿ ನಂದನಬಿತ್ತಿಲ್ನ್ನು ಕೋಟಿಚೆನ್ನಯರ ಮೂಲಸ್ಥಾನ ಎಂದು ಸಮುದಾಯವನ್ನು ನಂಬಿಸಿ ವಂಚಿಸಲಾಗಿದೆ ಎಂದು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಸಮುದಾಯದಿಂದ 13 ಕೋಟಿ ರೂ. ಸಂಗ್ರಹಿಸಿ ನಿರ್ಮಿಸಿದ ಗರಡಿ, ಚಾವಡಿಯ ಜಾಗ ಈಗಲೂ ಸಂಬಂಧಪಟ್ಟ ಟ್ರಸ್ಟ್ ಹೆಸರಿಗೆ ಮಾಡದಿರುವುದು ಬೇಸರದ ವಿಷಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನದಲ್ಲಿ ಕೂವೆತೋಟ ಮನೆ, ಕೆರೆ, ನಾಗಬ್ರಹ್ಮರ ಗುಡಿ, ಅರಮನೆ ಪ್ರದೇಶ, ತುಳಸಿಕಟ್ಟೆ ಸೇರಿದಂತೆ ಅನೇಕ ಕುರುಹುಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ ಧಾರ್ಮಿಕ, ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. 25 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು. ಪಡುಮಲೆಯಲ್ಲಿರುವ ಟ್ರಸ್ಟ್ ಮತ್ತು ಜಾಗ ನೋಂದಣಿಯಾಗಿದೆ. ಮೊದಲ ಹಂತದಲ್ಲಿ ಬೆರ್ಮರ ಗುಡಿ, ನಾಗಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ, ದೇಯಿ ಬೈದೆದಿ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಏಪ್ರಿಲ್ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.
ಪಡುಮಲೆ ಕ್ಷೇತ್ರದ ಆಡಳಿತ ಮೊಕ್ತೇಸರ ವಿನೋದ್ ಆಳ್ವ, ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರುಕ್ಮಯ ಪೂಜಾರಿ, ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆ, ಟ್ರಸ್ಟ್ ಕಾರ್ಯದರ್ಶಿ ಶ್ರೀಧರ್ ಪಟ್ಲ, ಪಡುಮಲೆ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ವೇದನಾಥ್ ಸುವರ್ಣ, ಟ್ರಸ್ಟ್ ಸದಸ್ಯ ಶೇಖರ್ ನಾರಾವಿ ಉಪಸ್ಥಿತರಿದ್ದರು.