ನವದೆಹಲಿ: ಖಲಿಸ್ತಾನಿ ಉಗ್ರರನ್ನು ಬೆಂಬಲಿಸುವಂಥ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್, ವಾಟ್ಸ್ಆ್ಯಪ್ ಫಾರ್ವರ್ಡ್ ಮೆಸೇಜ್ ಅನ್ನು ಸರಿಯಾಗಿ ಅರಿತುಕೊಳ್ಳದೆ ಹಂಚಿಕೊಂಡಿರುವ ತಪ್ಪಿಗಾಗಿ ಸೋಮವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
1984ರ ಆಪರೇಷನ್ ಬ್ಲೂಸ್ಟಾರ್ನ 37ನೇ ವಾಷಿರ್ಕೋತ್ಸವವನ್ನು ಸ್ಮರಿಸುತ್ತ ಅದರಲ್ಲಿ ಮೃತಪಟ್ಟಿದ್ದ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆಯ ಚಿತ್ರವನ್ನು ಹರ್ಭಜನ್ ಸಿಂಗ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ 40 ವರ್ಷದ ಹರ್ಭಜನ್ ಸಿಂಗ್ ಅವರನ್ನು ದೇಶದ್ರೋಹಿ ಎಂದು ನೆಟ್ಟಿಗರು ಟೀಕಿಸಿ ವಾಕ್ ಪ್ರಹಾರ ನಡೆಸಿದ್ದರು. ತಪ್ಪಿನ ಅರಿವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಹರ್ಭಜನ್ ಸಿಂಗ್, ನಿನ್ನೆ ಹಾಕಿದ ಇನ್ಸ್ಟಾಗ್ರಾಂ ಪೋಸ್ಟ್ಗಾಗಿ ಕ್ಷಮೆಯಾಚಿಸುವೆ ಮತ್ತು ನನ್ ಸ್ಪಷ್ಟನೆಯನ್ನು ನೀಡಲು ಬಯಸಿರುವೆ. ಅದೊಂದು ವಾಟ್ಸ್ಆ್ಯಪ್ ಫಾರ್ವರ್ಡ್ ಮೆಸೇಜ್ ಆಗಿತ್ತು. ಅದರ ವಸ್ತುವಿನ ಬಗ್ಗೆ ಸರಿಯಾಗಿ ಪರಿಶೀಲಿಸದೆ ನಾನು ಅದನ್ನು ಪೋಸ್ಟ್ ಮಾಡಿದ್ದೆ ಎಂದಿದ್ದಾರೆ.
ಇದನ್ನೂ ಓದಿ: ಕೊಲೆ ಆರೋಪಿ ಸುಶೀಲ್ ಕುಮಾರ್ ಒಲಿಂಪಿಕ್ಸ್ ಪದಕ, ಪದ್ಮಶ್ರೀ, ಖೇಲ್ರತ್ನ ಪ್ರಶಸ್ತಿ ವಾಪಸ್ ಕೊಡ್ಬೇಕಾ?
ಅದು ನನ್ನ ತಪ್ಪು ಮತ್ತು ಅದನ್ನು ಒಪ್ಪಿಕೊಳ್ಳುವೆ. ಆ ಚಿತ್ರದಲ್ಲಿ ಇರುವ ವ್ಯಕ್ತಿಗೆ ನನ್ನ ಯಾವುದೇ ಬೆಂಬಲವಿಲ್ಲ. ನಾನೋರ್ವ ದೇಶಕ್ಕಾಗಿ ಹೋರಾಡುವ ಸಿಖ್, ದೇಶದ ವಿರುದ್ಧವಲ್ಲ. ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದ ತಪ್ಪಿಗಾಗಿ ನಾನು ಬೇಸರತ್ ಕ್ಷಮೆಯಾಚಿಸುವೆ. ದೇಶದ ವಿರುದ್ಧ ನಿಲ್ಲುವ ಗುಂಪುಗಳಿಗೆ ನಾನು ಯಾವತ್ತೂ ಬೆಂಬಲ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ. ನಾನು ಕಳೆದ 20 ವರ್ಷಗಳಿಂದ ದೇಶದ ಪರ ರಕ್ತ ಮತ್ತು ಬೆವರು ಹರಿಸಿದ್ದೇನೆ. ಭಾರತದ ವಿರುದ್ಧವಿರುವ ಯಾವುದನ್ನೂ ನಾನು ಬೆಂಬಲಿಸಲಾರೆ ಎಂದು ಭಾರತ ಪರ 103 ಟೆಸ್ಟ್ ಆಡಿ 417 ವಿಕೆಟ್ ಕಬಳಿಸಿರುವ ಹರ್ಭಜನ್ ವಿವರಣೆ ನೀಡಿದ್ದಾರೆ.
1984ರಲ್ಲಿ ಖಲಿಸ್ತಾನ ಉಗ್ರರು ಅಮೃತಸರದ ಸ್ವರ್ಣ ಮಂದಿರಕ್ಕೆ ದಾಳಿ ನಡೆಸಿದಾಗ ಭಾರತೀಯ ಸೇನೆ ಆಪರೇಷನ್ ಬ್ಲೂಸ್ಟಾರ್ ಹೆಸರಿನ ಕಾರ್ಯಾಚರಣೆ ನಡೆಸಿ ಅವರನ್ನು ಸದೆಬಡಿದಿತ್ತು. ಬಿಂದ್ರಾನ್ವಾಲೆ ಆಗ ಖಲಿಸ್ತಾನ ಉಗ್ರರ ಗುಂಪಿನ ನೇತೃತ್ವ ವಹಿಸಿದ್ದ ಮತ್ತು ಸೇನಾ ಕಾರ್ಯಾಚರಣೆಗೆ ಹತನಾಗಿದ್ದ.