ಶಿವಮೊಗ್ಗ: ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ ಮಾಡಿದ ಎಂಟೂ ಆರೋಪಿಗಳನ್ನು ಪೊಲೀಸರು ಬುಧವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ವಿನೋಬನಗರ ಠಾಣೆ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಏಳು ದಿನ ಕಸ್ಟಡಿಗೆ ಪಡೆದುಕೊಂಡರು.
ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ 5ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಲಯ ಜಿ.ಎನ್.ಶಿವಕುಮಾರ್ ಅವರ ಎದುರು ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿದರು.
ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಒಂದು ವಾರ ಪೊಲೀಸ್ ವಶಕ್ಕೆ ನೀಡಿದರು. ಜು. 27ರಂದು ಮಧ್ಯಾಹ್ನ 3ಕ್ಕೆ ಮತ್ತೆ ನ್ಯಾಯಾಲಯಕ್ಕೆ ಹಾಜರಿ ಪಡಿಸಲು ಸೂಚಿಸಿದ್ದಾರೆ. ನ್ಯಾಯಾಧೀಶರ ಆದೇಶದ ಬೆನ್ನಲ್ಲೇ ಏಳು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡರು.
ಬಿಗಿ ಭದ್ರತೆ: ಜು.14ರಂದು ಮಧ್ಯಾಹ್ನ ವಿನೋಬನಗರ ಪೊಲೀಸ್ ಚೌಕಿಯ ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಕಾರ್ತಿಕ್, ನಿತಿನ್, ಚಂದನ್, ಮದನ್, ಾರುಕ್, ಆಂಜನೇಯ, ಮಧುಸೂಧನ್ ಮತ್ತು ಮಧು ಸೋಮವಾರ ರಾತ್ರಿಯೇ ಚಿಕ್ಕಮಗಳೂರಿನ ಎಸ್ಪಿ ಕಚೇರಿಯಲ್ಲಿ ಶರಣಾಗಿದ್ದರು. ಅಲ್ಲಿಂದ ಮಂಗಳವಾರ ರಾತ್ರಿ ಅವರನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.