ಹಾಸನ: ಏಪ್ರಿಲ್ ನಂತರ ಲಾಕ್ಡೌನ್ ಮುಗಿದಾಕ್ಷಣ ಕರೊನಾ ವೈರಸ್ ನಿಯಂತ್ರಣ ಆಗುವುದಿಲ್ಲ. ಈ ಕಾಯಿಲೆಯ ಹಣೆಬರಹವೇ ಇಷ್ಟು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಹಾಗೇ ಕರೊನಾ ಹತೋಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡ ಕ್ರಮವನ್ನು ದೇವೇಗೌಡರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ಮತ್ತು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರು. ಕರೊನಾ ವೈರಸ್ ವೇಗವಾಗಿ ಹರಡುವುದನ್ನು ತಡೆದರು. ಇದು ಮೆಚ್ಚುವಂಥದ್ದು. ಆದರೆ ರೈತರ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿಗೆ ಪತ್ರ ಬರೆಯಬೇಕು. ಅದಕ್ಕೂ ಮೊದಲು ಸರ್ಕಾರದ ವೈಫಲ್ಯ ಪಟ್ಟಿ ಮಾಡಬೇಕು. ಕೇಂದ್ರ ಹೇಳಿದ್ದೇನು, ಇಲ್ಲಿನ ರಾಜ್ಯ ಮಾಡಿದ್ದೇನು ಎಂದು ಗಮನಿಸಿಕೊಳ್ಳಬೇಕು ಎಂದಿದ್ದಾರೆ.
ತೋಟಗಾರಿಕೆ, ತರಕಾರಿ ಬೆಳೆ ಸಾಗಣೆಗೆ ಸಂಬಂಧಪಟ್ಟಂತೆ ರಾಜ್ಯ-ರಾಜ್ಯಗಳ ನಡುವೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡಿ ಎಂದು ಪತ್ರ ಬರೆದಿದ್ದೇನೆ. ಆಯಾ ರಾಜ್ಯಗಳು ತಮ್ಮಲ್ಲಿ ಏನು ಕೊರತೆ ಇದೆ ಅನ್ನೊದನ್ನ ನೋಡಿ ಆನ್ಲೈನ್ನಲ್ಲಿ ತರಿಸಿಕೊಳ್ಳಬೇಕು. ಹಾಗೇ ಹೆಚ್ಚಿಗೆ ಇರುವುದನ್ನು ಮತ್ತೊಂದು ರಾಜ್ಯಕ್ಕೆ ನೀಡಬೇಕು. ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಅದಕ್ಕಿನ್ನೂ ಯಾವುದೇ ಉತ್ತರ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡೋಣ ಎಂದರೆ ಪರಿಸ್ಥಿತಿ ಸರಿಯಿಲ್ಲ ಎಂದರು.
ಪ್ರಧಾನಮಂತ್ರಿ ಒಬ್ಬರೇ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಸಚಿವರ ತಂಡ ಶ್ರಮಿಸಬೇಕು. ರೈತರು ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ನಾನು ಮಾತನಾಡಿಸಲು ಹೋದರೆ ನನ್ನ ಮೇಲೇ ರೇಗಿದರು. ಮುಖ್ಯಮಂತ್ರಿ ಕೂಡ ನಿನ್ನೆ ಹಲವು ಕಡೆ ನಡೆದು ಹೋಗಿ ಪರಿಸ್ಥಿತಿ ಅವಲೋಕನ ಮಾಡಿದರು. ಆದರೇನು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಈಗ ರಾಜಕೀಯ ಮಾಡೋ ಸನ್ನಿವೇಶ ಇಲ್ಲ ಎಂದರು ಹೇಳಿದರು. (ದಿಗ್ವಿಜಯ ನ್ಯೂಸ್)