ಹುಬ್ಬಳ್ಳಿ: ಕರ್ನಾಟಕದಲ್ಲಿ ವರುಣನ ಅವಕೃಪೆಯಿಂದಾಗಿ ಮುಂಗಾರು ಮಳೆ ಕಡಿಮೆಯಾಗಿದ್ದು, ಬೆಳೆಗಳು ಒಣಗುತ್ತಿವೆ. ಕೆಲವೆಡೆ ಬಿತ್ತನೆ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಎಲ್ಲೆಡೆ ವಿವಿಧ ಆಚರಣೆಗಳನ್ನು ಮಾಡಲಾಗುತ್ತಿದೆ.
ಇಲ್ಲಿಯ ನವನಗರದಲ್ಲಿ ಗುರ್ಜಿ ಪೂಜೆ ಮಾಡುವ ಮೂಲಕ ವರುಣನ ಆರಾಧನೆ ನಡೆಯಿತು. ನವನಗರದ ಲಾಸ್ಯ ಸುಹಾಸ್ಯ ಪರಿವಾರದ ಮಹಿಳೆಯರು ಭಕ್ತಿ, ಭಾವದಿಂದ ಗುರ್ಜಿ ಪೂಜೆ ಮಾಡಿ ಮಳೆರಾಯನ ಆಗಮನಕ್ಕೆ ಪ್ರಾರ್ಥಿಸಿದರು.
ಪೂಜೆ ನಂತರ ಒಂದಿಷ್ಟು ಜಿಟಿಜಿಟಿ ಮಳೆಯೂ ಆಗಿದ್ದರಿಂದ ಸಂಭ್ರಮಪಟ್ಟರು.
ಪರಿವಾರದ ಲಕ್ಷ್ಮೀ ಸವಣೂರ (ಸಿದ್ದೇಶ್ವರಮಠ) ಅವರನ್ನು ಗುರ್ಜಿಯನ್ನಾಗಿ ಮಾಡಿ, ತಲೆ ಮೇಲೆ ನೀರೆರೆದರು. ಮಳೆರಾಯನ ಕುರಿತು ಜಾನಪದ ಹಾಡುಗಳನ್ನು ಹೇಳಿದರು.
ಗುರ್ಜಿ ಪೂಜೆ ಸಮಾರಂಭದಲ್ಲಿ ಮಹಿಳಾ ಬಳಗದ ಸುಲೋಚನಾ ಗೌರಿಮಠ, ಸುಮಂಗಲಾ ಕೋಳಿವಾಡ, ಲಲಿತಾ ಡೊಳ್ಳಿನ, ಚಂದ್ರಿಕಾ ಬೇವೂರ, ಸೋನುಬಾಯಿ ಪವಾರ್, ಜಯಲಕ್ಷ್ಮೀ ಮಾಳಾಪುರ, ವಿಜಯಾ ಗುಡ್ಡಾನವರ, ಮಹಾದೇವಿ ಪುಟ್ಟಿ, ಲಲಿತಾ ನೀಲಗಾರ, ಸುಜಾತಾ ಹತ್ತಿ, ಹಲವಾರು ಮಹಿಳೆಯರು ಭಾಗವಹಿಸಿದ್ದರು.