ಚಿತ್ರ: ಗುಲಾಬೋ ಸಿತಾಬೋ
ನಿರ್ದೇಶನ: ಸೂಜಿತ್ ಸಿರ್ಕಾರ್
ತಾರಾಗಣ: ಅಮಿತಾಬ್ ಬಚ್ಚನ್, ಆಯುಷ್ಮಾನ್ ಖುರಾನಾ, ಫಾರುಕ್ ಜಾಫರ್, ವಿಜಯ್ ರಾಜ್ ಇತರರು..
ಸ್ಟಾರ್: 3/5
| ಮಂಜು ಕೊಟಗುಣಸಿ ಬೆಂಗಳೂರು
ನಿರ್ದೇಶಕ ಸೂಜಿತ್ ಸಿರ್ಕಾರ್ ಹೇಳುವ ಕಥೆಗಳೇ ಅಂಥವು. ಒಂಥರಾ ಸ್ಲೋ ಪಾಯಿಸನ್ ಇದ್ದಂತೆ. ಶುರುವಾಗುವುದೇ ತಡ, ಬಳಿಕ ಕಚ್ಚಿಕೊಂಡರೆ ತಂತಾನೇ ನೋಡಿಸಿಕೊಂಡು ಹೋಗುತ್ತವೆ. ‘ಗುಲಾಬೋ ಸಿತಾಬೋ’ ಸಿನಿಮಾದಲ್ಲಾಗಿದ್ದು ಅದೇ. ಹಳೇ ಮಹಲು, ಹಣದ ಹಪಹಪಿ ಮತ್ತು 94ರ ಇಳಿವಯಸ್ಸಿನಲ್ಲೂ ಅರಳುವ ಪ್ರೇಮ; ಈ ಮೂರು ವಿಚಾರಗಳನ್ನು ಆಯ್ದುಕೊಂಡು ಬೇರೆಯದೇ ಸೊಗಡಿನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ಸೂಜಿತ್. ಅದು ಪ್ರತಿ ಫ್ರೇಮ್ನಲ್ಲೂ, ಪ್ರತಿ ಸಂಭಾಷಣೆಯಲ್ಲೂ, ಕಲಾವಿದರ ಪ್ರತಿ ಹಾವಭಾವದಲ್ಲೂ ವ್ಯಕ್ತವಾಗುತ್ತ ಹೋಗುತ್ತದೆ.
ಇದನ್ನೂ ಓದಿ: ದಯಮಾಡಿ ಈ ಕಾರ್ಯಕ್ರಮಕ್ಕೆ ಯಾರೂ ಬರಲೇಬೇಡಿ!; ನಿರ್ದೇಶಕ ನಾಗಶೇಖರ್, ಡಾರ್ಲಿಂಗ್ ಕೃಷ್ಣ ಮನವಿ …
78ರ ವೃದ್ಧ ಮಿರ್ಜಾ (ಅಮಿತಾಬ್ ಬಚ್ಚನ್) ವಿಚಿತ್ರ ಸ್ವಭಾವದ ಹಣದ ಹಪಹಪಿವುಳ್ಳಂಥ ಮನುಷ್ಯ. ಆತನಿಗೆ 94 ವರ್ಷ ವಯಸ್ಸಿನ ಹೆಂಡತಿ ಫಾತಿಮಾ ಬೇಗಂ. ಬೃಹತ್ ಬಂಗಲೆಯ ಒಡತಿ ಆಕೆ. ಆ ಬಂಗಲೆಯಲ್ಲಿನ ಹತ್ತಾರು ಮನೆಗಳಿಂದ ಬರುವ ಬಾಡಿಗೆಯೇ ಮಿರ್ಜಾ ಮತ್ತು ಫಾತಿಮಾರ ತಿಂಗಳ ಆದಾಯ. ಆದರೆ, ಮಿರ್ಜಾ ಮಾತ್ರ ಹಣಬಾಕ! ಅದ್ಯಾವ ಮಟ್ಟಿಗೆ ಅಂದರೆ, ಪತ್ನಿಗೆ ಗೊತ್ತಾಗದಂತೆ ತನ್ನದೆ ಬೃಹತ್ ಮಹಲ್ನಲ್ಲಿನ ಬಲ್ಬ್ಗಳನ್ನು ಮಾರಿ ಬಂದ ಹಣವನ್ನು ಜೇಬಿಗಿಳಿಸುತ್ತಿರುತ್ತಾನೆ. ಇತ್ತ ಆತನ ಜಿಡ್ಡುತನ ಕಂಡು ಬಾಡಿಗೆದಾರರೇ ಅಸಹ್ಯ ಪಟ್ಟುಕೊಳ್ಳುತ್ತಿರುತ್ತಾರೆ. ಅದರಲ್ಲಿ ಹಿಟ್ಟಿನ ಗಿರಣಿ ನಡೆಸುವ ಬಾಂಕಿ ರಸ್ತೊಗಿ (ಆಯುಷ್ಮಾನ್ ಖುರಾನಾ) ಸಹ ಒಬ್ಬ..
ಬೃಹತ್ ಮಹಲ್ ನೋಡಿ ತನಗಿಂತ 16 ವರ್ಷ ಹಿರಿಯಳಾದ ಬೇಗಂಳನ್ನು ಮದುವೆಯಾಗಿರುವ ಮಿರ್ಜಾ. ಹೇಗಾದರೂ ಮಾಡಿ ಮಹಲ್ ತನ್ನ ವಶಕ್ಕೆ ಪಡೆಯಬೇಕು ಎಂಬ ಲೆಕ್ಕಾಚಾರ ಆತನದ್ದು. ದಶಕಗಳಿಂದಲೂ ಅದೇ ಮಹಲ್ನಲ್ಲಿ ನೆಲೆಸಿರುವ ಜನರದ್ದೂ ಅದೇ ಚಿಂತೆ. ಕೊನೆಗೆ ಅದೇ ನೆಪ ಕೋರ್ಟ್ ಮೆಟ್ಟಿಲೇರುತ್ತದೆ. ಹಳೇ ಮಹಲ್ ಆಗಿರುವುದರಿಂದ ಪುರಾತತ್ವ ಇಲಾಖೆಯ ಕಣ್ಣೂ ಆ ಬಂಗಲೆ ಮೇಲೆ ಬೀಳುತ್ತದೆ.. ಕೊನೆಗೆ ಆ ಬೃಹತ್ ಮಹಲ್ ಯಾರ ಪಾಲಾಗುತ್ತದೆ ಎಂಬುದೇ ಕೌತುಕ. ‘ಗುಲಾಬೋ ಸಿತಾಬೋ’ ಶೀರ್ಷಿಕೆ ಹಿಂದಿನ ಅಸಲಿಯತ್ತೂ ಕ್ಲೈಮ್ಯಾಕ್ಸ್ನಲ್ಲಿಯೇ ಗೊತ್ತಾಗಲಿದೆ.
ಇದನ್ನೂ ಓದಿ: ಚಿರು ಸರ್ಜಾ ಆ್ಯಂಡ್ ಗ್ಯಾಂಗ್; ಇವು ಬಾಲ್ಯದ ಹಸಿ ಹಸಿ ನೆನಪುಗಳು..
‘ಗುಲಾಬೋ ಸಿತಾಬೋ’ ಸಿನಿಮಾ ನಮ್ಮ ನಡುವೆ ನಡೆಯುವ ಕಹಾನಿ. ಬಂಗಲೆಯೊಂದರ ಮಾಲೀಕ, ತನ್ನ ಬಾಡಿಗೆದಾರರನ್ನು ನೋಡಿಕೊಳ್ಳುವ ರೀತಿ, ಆತನಿಂದ ಪ್ರತಿ ತಿಂಗಳು ಅವರು ತಪ್ಪಿಸಿಕೊಳ್ಳುವ ಬಗೆ ಹೀಗೆ ಜೀವನದ ಸಣ್ಣ ಸಣ್ಣ ಏರಿಳಿತಗಳನ್ನು ಹದವಾಗಿ ಮಿಶ್ರಣ ಮಾಡಲಾಗಿದೆ. ಉತ್ತರ ಪ್ರದೇಶದ ಲಖನೌನ ನೇಟಿವಿಟಿ ಇಡೀ ಸಿನಿಮಾದ ಹೈಲೈಟ್. ಅಲ್ಲಿನ ಭಾಷಾ ಸೊಗಡು, ಹೊರಡುವ ಪ್ರತಿ ಸಂಭಾಷಣೆ ನಿಜಕ್ಕೂ ಮಜವೆನಿಸುತ್ತದೆ. ಅಮಿತಾಬ್ ಅವರನ್ನು ಈ ಹಿಂದೆಂದೂ ನೋಡಿರದ ರೀತಿಯಲ್ಲಿ ಪ್ರಸೆಂಟ್ ಮಾಡಿದ್ದಾರೆ ನಿರ್ದೇಶಕ ಸೂಜಿತ್. ಅಮಿತಾಬ್ ಅವರ ಸಣ್ಣ ಸನ್ನೆ, ಅವರು ನಡೆದಾಡುವ ಶೈಲಿ, ಮಾತನಾಡುವ ಧಾಟಿ ನಿಜಕ್ಕೂ ವಾವ್ ಎನಿಸುವಂತೆ ಮಾಡುತ್ತದೆ.
ಅಂದಹಾಗೆ, ಸೂಜಿತ್ ಸಿರ್ಕಾರ್ ಈ ಸಿನಿಮಾದಲ್ಲಿ ಕ್ಲಿಷ್ಟ ಅನಿಸುವಂತದ್ದೇನು ಹೇಳಿಲ್ಲ. ನಿತ್ಯ ಘಟಿಸುವ ಒಂದಷ್ಟು ಸನ್ನಿವೇಶಗಳಿಗೆ ಬಗೆಬಗೆ ಪಾತ್ರಗಳ ಮೂಲಕ ಬಣ್ಣ ಬಳಿದು, ಅವುಗಳಿಗೆ ಭಿನ್ನ ಹೆಸರು ಕೊಟ್ಟು, ಹಳೇ ಬಂಗಲೆಯಲ್ಲಿ ಬಿಟ್ಟಿದ್ದಾರೆ. ಆ ಎಲ್ಲ ಪಾತ್ರಗಳು ಅಲ್ಲಿ ನೈಜವಾಗಿಯೇ ಜೀವಂತಿಸಿವೆ. ಒಂದಷ್ಟು ನ್ಯೂನತೆಗಳು ಕಂಡು ಬಂದರೆ, ಸಿನಿಮಾ ನೋಡಿದ ಮೇಲೆ ಅದೆಲ್ಲ ಮರೆಯಾಗುತ್ತದೆ.
PHOTO GALLERY| ಬರ್ತಡೇ ಗರ್ಲ್ ದಿಶಾರ ನಶೆ ಏರಿಸೋ ಹಾಟ್ ಫೋಟೋ ಝಲಕ್!