ಶೃಂಗೇರಿ: ಬೆಂಗಳೂರಿನ ಉಪ್ಕೃತಿ ಸ್ವಯಂ ಸೇವಾ ಸಂಸ್ಥೆಯಿಂದ ಭಾನುವಾರ ತಾಲೂಕಿನ ಗಂಡಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ, ಕಾಂಪೌಂಡ್ ಮೇಲೆ ಅತ್ಯಾಕರ್ಷಕ ಚಿತ್ರವನ್ನು ಬಿಡಿಸಲಾಯಿತು.
30 ಜನರನ್ನು ಒಳಗೊಂಡ ಪದಾಧಿಕಾರಿಗಳು ಎರಡು ದಿನದಲ್ಲಿ ಪರಿಸರ, ಸಂಸ್ಕೃತಿ, ಸಾಂಸ್ಕೃತಿಕ ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ಬರೆದ ಚಿತ್ರಗಳು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಗಮನ ಸೆಳೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ ಅವರ ಸಮ್ಮುಖದಲ್ಲಿ ಸಂಸ್ಥೆಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಚಂದನ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕು. ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಗ್ರಾಮಸ್ಥರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯ. ರಜಾ ಕಾಲದಲ್ಲಿ ನಮ್ಮ ಸಂಸ್ಥೆ ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಮಕ್ಕಳ ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಬರೆಯುವ ಹವ್ಯಾಸ ಹಮ್ಮಿಕೊಂಡಿದ್ದೇವೆ ಎಂದರು.
ಸಂಸ್ಥೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಹಾಗೂ ವಿಜ್ಞಾನ ಮಾದರಿಗಳನ್ನು ವಿತರಿಸಲಾಯಿತು. ಸಂಸ್ಥೆಯ ಪದಾಧಿಕಾರಿ ಶಶಾಂಕ್, ಎಸ್ಡಿಎಂಸಿ ಅಧ್ಯಕ್ಷ ಎಂ.ವಿ.ಜಯರಾಮ್, ಮುಖ್ಯಶಿಕ್ಷಕ ಎಸ್.ವಿ.ವಿಜಯ್, ಹಳೇ ವಿದ್ಯಾರ್ಥಿ ಡಿ.ಕೆ.ಆದಿತ್ಯ ಇತರರಿದ್ದರು.