ಆಯನೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಎಲ್ಲ ರೀತಿಯ ಚಿಕಿತ್ಸೆಗಳು ಉಚಿತವಾಗಿ ದೊರೆಯುವಾಗ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ನಾಗರಾಜ ನಾಯ್ಕ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ರೋಟರಿ ಕ್ಲಬ್, ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ತಾಯಿ ಹಾಗೂ ಮಕ್ಕಳ ಆರೋಗ್ಯ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ ಹಾಗೂ ಮಕ್ಕಳ ಆರೋಗ್ಯ ಸುಧಾರಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಅನಿಮೀಯ ಮುಕ್ತ ಕರ್ನಾಟಕ ಮಾಡುವ ಯೋಜನೆ ಇದೆ. ಮಕ್ಕಳು, ವೃದ್ಧರಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆ ನಮ್ಮ ದೇಶದಲ್ಲಿ ಶೇ.56 ಇದೆ. ಇದನ್ನು ತಡೆಗಟ್ಟಲು ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದರು.
ಪ್ರತಿಯೊಂದು ಹಳ್ಳಿಯಲ್ಲೂ 1 ವರ್ಷದ ಸಣ್ಣ ಮಕ್ಕಳಿಂದ ಹಿಡಿದು 70 ವರ್ಷದ ವೃದ್ಧರವರೆಗೂ ರಕ್ತಪರೀಕ್ಷೆ ನಡೆಸಲಾಗುವುದು. ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಅಂತಹವರಿಗೆ ಮಾತ್ರೆ ನೀಡಲಾಗುವುದು. ನಮ್ಮಲ್ಲಿ ಸಮತೋಲನ ಆಹಾರದ ತೆಗೆದುಕೊಳ್ಳುವುದಿಲ್ಲ. ಈ ಕುರಿತು ಆಸ್ಪತ್ರೆ, ಅಂಗನವಾಡಿಗಳಲ್ಲಿ ಕಾರ್ಯಕ್ರಮ, ಶಿಬಿರ ಹಾಗೂ ಸಭೆ ನಡೆಸಿ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ ಮಾತನಾಡಿ, ಮಗು ಹುಟ್ಟಿದ ಮೊದಲ ಸಾವಿರ ದಿನಗಳು ತಾಯಿ ಹಾಗೂ ಮಗುವಿಗೆ ಸೂಕ್ಷ್ಮ ದಿನಗಳು. ಆ ಎರಡು ವರ್ಷದ ಮಗುವಿನ ಮಿದುಳು ಶೇ.80 ಭಾಗ ಬೆಳೆಯುತ್ತದೆ. ಆಗ ಹೆಚ್ಚು ಆರೈಕೆಯ ಆವಶ್ಯಕತೆ ಇದೆ ಎಂದರು.
ಹೆರಿಗೆ ತಜ್ಞೆ ಡಾ. ಸಿಂಧು ಉಪನ್ಯಾಸ ನೀಡಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಗುಡುದಯ್ಯ ಕಸಬಿ, ರೋಟರಿಯ ಅಧ್ಯಕ್ಷ ರವೀಂದ್ರ, ಸದಸ್ಯರಾದ ಉಮಾ, ಗಿರಿಜಾ, ಅನ್ನಪೂರ್ಣಾ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಲ್ಪಾಶ್ರೀ, ಡಾ. ಮೋಹನ್, ಡಾ. ಹರ್ಷವರ್ಧನ್, ರಾಜೇಂದ್ರ ಪ್ರಸಾದ್, ಅಂಗನವಾಡಿ ಮೇಲ್ವಿಚಾರಕಿ ಅನುಷಾ ಪಾಟೀಲ್, ಮಂಜುನಾಥ ಇತರರಿದ್ದರು.