ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು ವಾಸ್ತವ ಗಡಿರೇಖೆ ಬಳಿ ಬಾಲ ಬಿಚ್ಚಿದರೆ, ಅವರಿಗೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಲು ಭಾರತದ ಸೇನಾಪಡೆಗೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ.
ಲಡಾಖ್ನ ಪೂರ್ವ ಭಾಗದಲ್ಲಿ ಸದ್ಯ ಇರುವ ಪರಿಸ್ಥಿತಿ ಕುರಿತು ಮಾಹಿತಿಯ ಪಡೆಯಲು ಮಿಲಿಟರಿಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶಿಯವಾಗಿ ಸಿದ್ಧವಾಗುತ್ತಿರುವ ಕೋವಿಡ್ ಔಷಧ ಫ್ಯಾಬಿಫ್ಲೂ ಮಾತ್ರೆಯ ಬಗ್ಗೆ ಒಂದಷ್ಟು ಮಾಹಿತಿ…
ರಕ್ಷಣಾ ಪಡೆಯ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಾನೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ವಾಯಪಡೆ ಮುಖ್ಯಸ್ಥ ಆರ್.ಕೆ.ಎಸ್. ಬಹಾದ್ದೂರಿಯಾ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಲಡಾಖ್ ಸೇರಿ 3,500 ಕಿ.ಮೀ. ಉದ್ದವಿರುವ ವಾಸ್ತವ ಗಡಿರೇಖೆಯುದ್ದಕ್ಕೂ, ವೈಮಾನಿಕ ಮಾರ್ಗ ಮತ್ತು ಆಯಾಕಟ್ಟಿನ ಸಮುದ್ರ ಮಾರ್ಗಗಳೆಲ್ಲೆಡೆ ಭದ್ರತೆಯನ್ನು ಹೆಚ್ಚಿಸುವ ಜತೆಗೆ ಚೀನಿ ಯೋಧರ ಚಟುವಟಿಕೆಯ ಮೇಲೆ ಹದ್ದಿನಕಣ್ಣಿರಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಿದರು ಎನ್ನಲಾಗಿದೆ. ಒಂದು ವೇಳೆ ಚೀನಿ ಯೋಧರು ಬಾಲ ಬಿಚ್ಚಿದರೆ, ತಕ್ಷಣವೇ ಅದನ್ನು ಕತ್ತರಿಸಲು ಸೂಕ್ತ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದರು ಎಂದು ಹೇಳಲಾಗಿದೆ.